ಚಂಡೀಗಡ: ಪಂಜಾಬ್ನ ತರನ್ ತರನ್ ಜಿಲ್ಲೆಯ ಕಲ್ಯಾಣ ಮಂಟಪವೊಂದರಲ್ಲಿ ನಾಲ್ವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲ್ಯಾಣ ಮಂಟಪದ ಸಂಗ್ರಹಣಾ ಕೊಠಡಿಯಲ್ಲಿ ಶುಕ್ರವಾರ ರಾತ್ರಿ ಮಲಗಿದ್ದ ಕಾರ್ಮಿಕರು ಚಳಿಯಿಂದ ರಕ್ಷಣೆ ಪಡೆಯಲು ಕಲ್ಲಿದ್ದಲು ಉರಿಸಿದ್ದಾರೆ. ಈ ವೇಳೆ ಬಿಡುಗಡೆಯಾದ ಕಾರ್ಬನ್ ಮೋನಾಕ್ಸೈಡ್ ಉಸಿರಾಡಿ ಸಾವನ್ನಪ್ಪಿರಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಬ್ಬ ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಮಿಕರು ಮಲಗಿದ್ದ ಕೊಠಡಿಯ ಬಾಗಿಲು ಮುಚ್ಚಲಾಗಿತ್ತು. ಶನಿವಾರ ಬೆಳಿಗ್ಗೆ ಇತರ ಕಾರ್ಮಿಕರು ಬಂದಾಗ ದುರ್ಘಟನೆ ಬೆಳಕಿಗೆ ಬಂದಿದೆ ಎಂದಿದ್ದಾರೆ.
ಮೃತ ಕಾರ್ಮಿಕರು ಕಲ್ಯಾಣ ಮಂಟಪಗಳಲ್ಲಿ ಸ್ವಚ್ಛತೆ ಮತ್ತು ಅಡುಗೆ ಕೆಲಸ ಮಾಡುತ್ತಿದ್ದರು.