ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ– ಸಂಹಿತೆ ಉಲ್ಲಂಘಿಸಿ ಹೊಸ ಹುದ್ದೆಗಳ ಸೃಷ್ಟಿ!

ವಿಧಾನಸಭೆ ಸಚಿವಾಲಯದ ನೇಮಕಾತಿ ಹಗರಣ: ರಾಜಕೀಯ ಒತ್ತಡ ಕಾರಣ?
Last Updated 12 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಿಯಮಗಳನ್ನು ಪಾಲಿಸದೆ, ನೇಮಕಾತಿ ಮಾಡಿದ ಆರೋಪಕ್ಕೊಳಗಾಗಿರುವ ವಿಧಾನಸಭೆ ಸಚಿವಾಲಯ, ಚುನಾವಣೆ ನೀತಿ–ಸಂಹಿತೆ ಜಾರಿಯಲ್ಲಿದ್ದಾಗಲೇ 107 ಹೊಸ ಹುದ್ದೆಗಳನ್ನು ಸೃಷ್ಟಿಸಿದೆ.

ವಿಧಾನಸಭೆ ಸಚಿವಾಲಯದಲ್ಲಿ 107 ಹುದ್ದೆಗಳನ್ನು ಸೃಷ್ಟಿಸಲು ಆರ್ಥಿಕ ಇಲಾಖೆ ಮೇ 5ರಂದು (ಪತ್ರ ಸಂಖ್ಯೆ ಆಇ– 211 ವೆಚ್ಚ –10/2018) ಒಪ್ಪಿಗೆ ನೀಡಿದೆ. ಎರಡು ದಿನಗಳ ಬಳಿಕ ವಿಧಾನಸಭೆ ಸಚಿವಾಲಯ ಹೊಸ ಹುದ್ದೆಗಳನ್ನು ಸೃಷ್ಟಿಸಿ (ಆದೇಶ ಸಂಖ್ಯೆ:ಕವಿಸಸ/ಆ–1 /49/ಶಾಭಕಾನಿಹುಸೃ/ 2018) ಆದೇಶ ಹೊರಡಿಸಿದೆ.

ಚುನಾವಣಾ ನೀತಿ–ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ಹುದ್ದೆಗಳನ್ನು ಸೃಷ್ಟಿಸುವಂತಿಲ್ಲ. ಆದರೆ, ವಿಧಾನಸಭೆ ಚುನಾವಣೆಗೆ ಒಂದು ವಾರ ಮೊದಲು ಆರ್ಥಿಕ ಇಲಾಖೆ ಹೊಸ ಹುದ್ದೆಗಳನ್ನು ಸೃಷ್ಟಿಸಲು ಹೇಗೆ ಒಪ್ಪಿಗೆ ನೀಡಿತು. ವಿಧಾನಸಭೆ ಸಚಿವಾಲಯ ಹೇಗೆ ಆದೇಶ ಹೊರಡಿಸಿತು ಎಂಬ ಪ್ರಶ್ನೆ ಉದ್ಭವಿಸಿದೆ. ‘ವಿಧಾನಸಭೆ ಸಚಿವಾಲಯದ ನಿರ್ಧಾರ ನೀತಿ– ಸಂಹಿತೆ ಸ್ಪಷ್ಟ ಉಲ್ಲಂಘನೆ’ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಇದಲ್ಲದೆ, ಚುನಾವಣೆ ಘೋಷಣೆಯಾಗುವ ಕೆಲವೇ ದಿನ ಮುನ್ನ ವಿಧಾನಸಭೆ ಸಚಿವಾಲಯದಲ್ಲಿ 191 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ‘ಈ ನೇಮಕದಲ್ಲೂ ಭಾರಿ ಅಕ್ರಮ ನಡೆದಿವೆ’ ಎಂಬ ಆರೋಪ ಕೇಳಿ ಬಂದಿತ್ತು. ಈ ನೇಮಕಾತಿ ಕುರಿತು ಆರ್ಥಿಕ ಇಲಾಖೆಯೂ ಆಕ್ಷೇಪ ಎತ್ತಿದೆ.

ರಾಜಕೀಯ ಒತ್ತಡ?: ಹೊಸದಾಗಿ 107 ಹುದ್ದೆಗಳನ್ನು ಸೃಷ್ಟಿಸಲು ರಾಜಕೀಯ ಒತ್ತಡ ಕಾರಣ. ಹದಿನಾಲ್ಕನೇ ವಿಧಾನಸಭೆಯ ಅವಧಿ ಮುಗಿಯುವ ಹಂತದಲ್ಲಿ ಪ್ರಭಾವಿ ರಾಜಕಾರಣಿಗಳು ತಮ್ಮ ಆಪ್ತರು, ಹಿತೈಷಿಗಳನ್ನು ಸಚಿವಾಲಯಕ್ಕೆ ನೇಮಿಸುವಂತೆ ಒತ್ತಡ ಹೇರಿದ್ದರು. ಇದರಿಂದ ಹೊಸದಾಗಿ ಹುದ್ದೆಗಳನ್ನು ಸೃಷ್ಟಿಸಲಾಯಿತು’ ಎಂದು ವಿಧಾನಸಭೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಶಾಸಕರ ಭವನದ ಆವರಣದಲ್ಲಿ ಹೊಸದಾಗಿ ಕಟ್ಟಲಾಗಿರುವ ಶಾಸಕರ ಭವನ ಕಟ್ಟಡ– 5 ನಿರ್ವಹಣೆಗೆ ಸಿಬ್ಬಂದಿ ನೇಮಕ ಮಾಡುವ ಸಂಬಂಧ ಅಧ್ಯಯನ ನಡೆಸಿ ವರದಿ ಕೊಡಲು ವಿಧಾನಸಭೆ ಸಚಿವಾಲಯದ ಜಂಟಿ ಕಾರ್ಯದರ್ಶಿ (ಆಡಳಿತ), ಉಪ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ, ಸಿಸ್ಟಂ ಮ್ಯಾನೇಜರ್‌, ಕ್ಷೇತ್ರಾಧಿಕಾರಿ ಮತ್ತು ಸಹಾಯಕ ಕ್ಷೇತ್ರಾಧಿಕಾರಿ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಕಟ್ಟಡದ ‘ಪರಿಶೀಲನೆ’ ನಡೆಸಿದ ಸಮಿತಿ, 107 ಹುದ್ದೆಗಳನ್ನು ಸೃಷ್ಟಿಸುವಂತೆ ಶಿಫಾರಸು ಮಾಡಿತು. ಈ ಹುದ್ದೆಗಳನ್ನು ಸೃಷ್ಟಿಸಲು ವಿಧಾನಸಭೆ ಹಿಂದಿನ ಅಧ್ಯಕ್ಷ ಕೆ.ಬಿ. ಕೋಳಿವಾಡ ಅನುಮೋದನೆ ನೀಡಿದರು. ಆನಂತರ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಕಳುಹಿಸಲಾಯಿತು. ಈ ಪ್ರಸ್ತಾವನೆಗೆ ಕೂಡಲೇ ಒಪ್ಪಿಗೆ ನೀಡುವಂತೆ ಪ್ರಮುಖ ಸ್ಥಾನಗಳಲ್ಲಿದ್ದ ಪ್ರಭಾವಿ ರಾಜಕಾರಣಿಗಳು ಆರ್ಥಿಕ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು ಎಂದು ಗೊತ್ತಾಗಿದೆ.

ಕೇವಲ ಸ್ವೀಪರ್‌ಗಳ ನೇಮಕ: ಶಾಸಕರ ಭವನದ ಸ್ವಚ್ಛತಾ ಕಾರ್ಯವನ್ನು ಹೊರಗುತ್ತಿಗೆ ನೀಡಲಾಗಿತ್ತು. ಅದನ್ನು ರದ್ದುಪಡಿಸಿ, ಕಾಯಂ ಸ್ವೀಪರ್‌
ಗಳನ್ನು ನೇಮಕ ಮಾಡಲಾಗಿದೆ. ಹೊರಗುತ್ತಿಗೆಗೆ ನಾಲ್ಕು ಕೋಟಿ ರೂಪಾಯಿ ಪಾವತಿ ಮಾಡಲಾಗುತಿತ್ತು. ಈಗ ಕಾಯಂ ಸ್ವೀಪರ್‌ಗಳ ಸಂಬಳಕ್ಕೆ ಕೇವಲ ಎರಡು ಕೋಟಿ ಖರ್ಚಾಗುತ್ತಿದೆ. ಸರ್ಕಾರಕ್ಕೆ ಎರಡು ಕೋಟಿ ಉಳಿತಾಯ ಆಗುತ್ತಿದೆ ಎಂದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್‌. ಮೂರ್ತಿ ಸ್ಪಷ್ಟಪಡಿಸಿದರು. ಆದರೆ, ಉಳಿದ ಹುದ್ದೆಗಳ ಬಗ್ಗೆ ಅವರು ಪ್ರಸ್ತಾಪಿಸಲಿಲ್ಲ.

ಆರ್ಥಿಕ ಇಲಾಖೆ ಆಕ್ಷೇಪಣೆ

‘ವಿಧಾನಸಭೆ ಸಚಿವಾಲಯದಲ್ಲಿ ಇತ್ತೀಚೆಗೆ ಎಷ್ಟು ಸಿಬ್ಬಂದಿ ನೇಮಕ ಮಾಡಲಾಗಿದೆ. ಯಾವ ಆಧಾರದಲ್ಲಿ ಈ ನೇಮಕಾತಿ ನಡೆದಿದೆ. ಇದಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ಪಡೆಯಲಾಗಿದೆಯೇ’ ಎಂದು ವಿವರಣೆ ನೀಡುವಂತೆ ಆರ್ಥಿಕ ಇಲಾಖೆಯು ವಿಧಾನಸಭೆ ಸಚಿವಾಲಯವನ್ನು ಕೇಳಿದೆ.

ವಿಧಾನಸಭೆ ಸಚಿವಾಲಯದಲ್ಲಿ ಹೊಸದಾಗಿ ನೇಮಕಗೊಂಡಿರುವ ಸಿಬ್ಬಂದಿ ವೇತನಕ್ಕೆ ಹೆಚ್ಚುವರಿ ಅನುದಾನ ನೀಡುವಂತೆ ಕೇಳಲಾಗಿತ್ತು. ಈ ಕುರಿತಂತೆ ವಿವರಣೆ ಕೇಳಿ ಆರ್ಥಿಕ ಇಲಾಖೆಯು ಪತ್ರ ಬರೆದಿದೆ. ಇಲಾಖೆಯ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡಲಾಗಿದೆ ಎಂದು ಮೂರ್ತಿ ಹೇಳಿದರು.

ವಿಧಾನಸಭೆ ಸಚಿವಾಲಯದಲ್ಲಿ ಫೆಬ್ರುವರಿ 23ರಿಂದ 25ರವರೆಗೆ ತರಾತುರಿಯಲ್ಲಿ ಸಂದರ್ಶನ ನಡೆಸಿ 191 ಮಂದಿಯನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗಿತ್ತು. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವೂ ಕೇಳಿಬಂದಿತ್ತು.

ನೇಮಕಾತಿ ಹಗರಣ ಕುರಿತು ‘ಪ್ರಜಾವಾಣಿ’ ವರದಿಗಳನ್ನು ಪ್ರಕಟಿಸಿತ್ತು.

ತನಿಖೆಗೆ ಆಗ್ರಹ

ಹುಬ್ಬಳ್ಳಿ: ವಿಧಾನಸಭಾ ಸಚಿವಾಲಯ ಸಿಬ್ಬಂದಿ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ಸ್ವತಂತ್ರ ತನಿಖಾ ಸಮಿತಿ ಮೂಲಕ ತನಿಖೆ ನಡೆಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್.ಆರ್. ಹಿರೇಮಠ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT