ಲಖನೌ:ಅಖಿಲ ಭಾರತ ಹಿಂದೂ ಮಹಾಸಭಾ (ಎಬಿಎಚ್ಎಂ) ಅಧ್ಯಕ್ಷ ಕಮಲೇಶ್ ತಿವಾರಿ ಶುಕ್ರವಾರ ಹತ್ಯೆಯಾಗಿದ್ದಾರೆ.
ಮನೆಯೊಳಗೆ ಕತ್ತು ಸೀಳಿದ ಸ್ಥಿತಿಯಲ್ಲಿ ತಿವಾರಿ ಮೃತದೇಹ ಪತ್ತೆಯಾಗಿತ್ತು. ವೈಯಕ್ತಿಕ ಜಗಳವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ.ಅಯೋಧ್ಯೆ ಪ್ರಕರಣದಲ್ಲಿ ತಿವಾರಿ ಕೂಡಾ ಕಕ್ಷಿದಾರರರಾಗಿದ್ದಾರೆ.
Lucknow: Hindu Mahasabha leader Kamlesh Tiwari has succumbed to injuries sustained after being shot at in his office, today. https://t.co/auu38lX8ZM
— ANI UP (@ANINewsUP) October 18, 2019
ತಿವಾರಿ ಹತ್ಯೆ ಖಂಡಿಸಿ ಫತೇಗಂಜ್ ಮತ್ತು ಅಮೀನಾಬಾದ್ ಪ್ರದೇಶದಲ್ಲಿ ಹಲವಾರು ಅಂಗಡಿಗಳನ್ನು ಬಂದ್ ಮಾಡಿಸಿ ಜನರ ಗುಂಪೊಂದು ಪ್ರತಿಭಟನೆ ನಡೆಸಿದೆ. ಅಹಿತಕರ ಘಟನೆಗಳು ನಡೆಯದಂತೆ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ.
ತಿವಾರಿ ಅವರ ಸಹಚರ ಸ್ವತಂತ್ರದೀಪ್ ಸಿಂಗ್ ಹೇಳಿಕೆ ಪ್ರಕಾರ, ಬೆಳಗ್ಗೆ 11 ಗಂಟೆಯ ಹೊತ್ತಿಗೆ ಇಬ್ಬರು ವ್ಯಕ್ತಿಗಳು ತಿವಾರಿ ಮನೆಗೆ ಬಂದಿದ್ದಾರೆ. ಅವರನ್ನು ಮನೆಯ ಮೊದಲ ಮಹಡಿಗೆ ಬರುವಂತೆ ತಿವಾರಿ ಹೇಳಿದ್ದಾರೆ. ದುಷ್ಕರ್ಮಿಗಳಲ್ಲೊಬ್ಬ ಸಿಗರೇಟ್ ತರುವಂತೆ ನನ್ನಲ್ಲಿ ಹೇಳಿದ್ದನು.ನಾನು ಸಿಗರೇಟ್ ತರಲು ಮಾರುಕಟ್ಟೆಗೆ ಹೋದೆ. ನಾನು ಹಿಂತಿರುಗಿ ಬಂದಾಗ ಕಮಲೇಶ್ ಸತ್ತು ಬಿದ್ದಿರುವುದನ್ನು ನೋಡಿ, ತಕ್ಷಣವೇ ಪೊಲೀಸರಿಗೆ ಮಾಹಿತಿ ತಿಳಿಸಿದೆ ಎಂದು ಹೇಳಿದ್ದಾರೆ.
ದುಷ್ಕರ್ಮಿಗಳು ತಿವಾರಿ ಪರಿಚಿತರೇ ಆಗಿದ್ದಾರೆ. ಅವರು ಆ ಮನೆಯಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ಇದ್ದರು. ಮನೆಯಿಂದ ಪಿಸ್ತೂಲ್ ಮತ್ತು ಖಾಲಿ ಕ್ಯಾಟ್ರಿಜ್ನ್ನು ಪೊಲೀಸರು ವಶ ಪಡಿಸಿ ಕೊಂಡಿದ್ದಾರೆ. ತಿವಾರಿಯ ಮರಣೋತ್ತರ ಪರೀಕ್ಷಾ ವರದಿ ಬಂದ ನಂತರವೇ ಅಲ್ಲಿ ಏನು ನಡೆದಿದೆ ಎಂಬುದನ್ನು ಹೇಳಲಾಗುವುದು ಎಂದಿದ್ದಾರೆ ಲಖನೌ ಐಟಿ ಎಸ್.ಕೆ ಭಗತ್.
ಇದನ್ನೂ ಓದಿ:ಕಮಲೇಶ್ ತಿವಾರಿ ಹೇಳಿಕೆ ಖಂಡಿಸಿ ಬೃಹತ್ ಪ್ರತಿಭಟನೆ
ಪ್ರವಾದಿ ಮುಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ 2015ರಲ್ಲಿ ತಿವಾರಿ ಸುದ್ದಿಯಾಗಿದ್ದರು. ತಿವಾರಿ ಹೇಳಿಕೆಗೆ ಮಸ್ಲಿಮರು ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದರು. ಮುಸ್ಲಿಮರು ಪ್ರತಿಭಟನೆ ನಡೆಸುತ್ತಿದ್ದಾಗಲೇ ತಿವಾರಿ ಫೇಸ್ಬುಕ್ನಲ್ಲಿ ಮುಸ್ಲಿಮರ ವಿರುದ್ಧ ಆಕ್ಷೇಪಾರ್ಹ ಬರಹ ಪ್ರಕಟಿಸಿದ್ದರು.
ಈ ಪ್ರಕರಣದಲ್ಲಿ ತಿವಾರಿ ವಿರುದ್ಧ ಐಪಿಸಿ ಸೆಕ್ಷನ್ 153ಎ, 295ಎ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿಯೂ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.2016ರಲ್ಲಿ ಅಲಹಾಬಾದ್ ಹೈಕೋರ್ಟ್ನ ಲಖನೌ ನ್ಯಾಯಪೀಠ ಈ ಪ್ರಕರಣವನ್ನು ತಳ್ಳಿಹಾಕಿತ್ತು
ಸೀತಾಪುರ್ ನಿವಾಸಿಯಾಗ ತಿವಾರಿ 2012ರಲ್ಲಿ ಸೆಂಟ್ರಲ್ ಲಖನೌನಿಂದ ವಿಧಾನಸಭಾ ಚುನಾವಣೆ ಸ್ಪರ್ಧಿಸಿ ಪರಾಭವಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.