ಗಾಜಿಪುರ (ಉತ್ತರ ಪ್ರದೇಶ): ಬಿಜೆಪಿ ಕಾರ್ಯಕರ್ತರತ್ತ ಬೆಟ್ಟು ಮಾಡಿ ತೋರಿಸಿದರೆ ಕೇವಲ ನಾಲ್ಕು ಗಂಟೆಗಳಲ್ಲಿ ಅವರ ಬೆರಳೇ ಇರುವುದಿಲ್ಲ ಎಂದು ಕೇಂದ್ರ ಸಚಿವ ಮನೋಜ್ ಸಿನ್ಹಾ ಬೆದರಿಕೆ ಹಾಕಿದ್ದಾರೆ.
ಗಾಜಿಪುರದಿಂದ ಮರು ಆಯ್ಕೆ ಬಯಸಿರುವ ಅವರು ಸೈದಾಪುರ ಪ್ರದೇಶದಲ್ಲಿ ಕಿಸಾನ್ ಪಂಚಾಯತ್ ಸಮ್ಮೇಳನದಲ್ಲಿ ಜನರನ್ನು ಉದ್ದೇಶಿಸಿ ಗುರುವಾರ ಸಂಜೆ ಮಾತನಾಡಿದರು.
‘ಅಪರಾಧ ಚಟುವಟಿಕೆಗಳ ಮೂಲಕ ಹಣ ಮಾಡುವವರನ್ನು ಮತ್ತು ಭ್ರಷ್ಟಾಚಾರ ಮಾಡುವವರನ್ನು ನಿಗ್ರಹಿಸಲು ಬಿಜೆಪಿ ಕಾರ್ಯಕರ್ತರು ಸಜ್ಜಾಗಿದ್ದಾರೆ. ಒಂದು ವೇಳೆ ಬಿಜೆಪಿ ಕಾರ್ಯಕರ್ತರ ಮೇಲೆ ಯಾರಾದರೂ ಬೆರಳೆತ್ತಿದರೆ, ಅಂತಹವರ ಬೆರಳು ನಾಲ್ಕು ಗಂಟೆಗಳೊಳಗೆ ಇಲ್ಲವಾಗುತ್ತದೆ’ ಎಂದು ಹೇಳಿದ್ದಾರೆ.
‘ಪೂರ್ವಾಂಚಲದ ಕ್ರಿಮಿನಲ್ ವ್ಯಕ್ತಿಯು ಗಾಜಿಪುರದ ಗಡಿ ದಾಟಿ ಬಿಜೆಪಿ ಕಾರ್ಯಕರ್ತನನ್ನು ದಿಟ್ಟಿಸಿ ನೋಡಿದರೂ ಸಾಕು, ಆತನ ಕಣ್ಣು ಇರುವುದಿಲ್ಲ’ ಎಂದೂ ಅವರು ಬೆದರಿಸಿದ್ದಾರೆ.