ವಾರಾಣಸಿ:ಗಂಗಾ ನದಿ ಮೇಲೆ ದೇಶದ ಮೊದಲ ಬಹು ಮಾದರಿ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು.
ಕೋಲ್ಕತ್ತದಿಂದ ಹಡಗಿನಲ್ಲಿ ಒಳನಾಡು ಜಲಮಾರ್ಗದ ಮೂಲಕಬಂದ ಕಂಟೈನರ್ ಅನ್ನುತಮ್ಮ ಕ್ಷೇತ್ರವಾದ ವಾರಾಣಸಿಯಲ್ಲಿ ಇಳಿಸಿಕೊಳ್ಳುವ ಮೂಲಕ ಅವರು ಈ ನಿಲ್ದಾಣ ಕಾರ್ಯಾರಂಭಕ್ಕೆ ಅವರು ಚಾಲನೆ ನೀಡಿದರು. ಆಹಾರ ಮತ್ತು ಪಾನೀಯಗಳನ್ನು ಹೊತ್ತು ಕಳೆದ ಅಕ್ಟೋಬರ್ನಲ್ಲಿ ಈ ಹಡಗು ಕೋಲ್ಕತ್ತದಿಂದ ಹೊರಟಿತ್ತು.
ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರವು ಜಲಮಾರ್ಗ ವಿಕಾಸ ಯೋಜನೆಯಡಿ ಈ ನಿಲ್ದಾಣವನ್ನು ನಿರ್ಮಾಣ ಮಾಡಿದೆ.
ವಿಶ್ವಬ್ಯಾಂಕ್ ನೆರವಿನಿಂದ ನಿರ್ಮಿಸಲಾಗುತ್ತಿರುವ ಬಹುಮಾದರಿಯ ನಾಲ್ಕು ನಿಲ್ದಾಣಗಳ ಪೈಕಿ, ಇದು ಮೊದಲನೆಯದಾಗಿದೆ. ಯೋಜನೆಯ ಒಟ್ಟು ಅಂದಾಜು ವೆಚ್ಚ ₹5,369 ಕೋಟಿಯಾಗಿದ್ದು, ವಿಶ್ವಬ್ಯಾಂಕ್ ಮತ್ತು ಕೇಂದ್ರಸರ್ಕಾರ ಸಮಾನವಾಗಿ ಇದನ್ನು ಭರಿಸಲಿವೆ.
1,500ದಿಂದ 2,000 ಟನ್ನಷ್ಟು ತೂಕದ ಸರಕನ್ನು ಈ ವಾರಾಣಸಿ–ಹಲ್ದಿಯಾ ಜಲಮಾರ್ಗದಲ್ಲಿ ಸಾಗಿಸಬಹುದಾಗಿದೆ.