ಶಿಮ್ಲಾ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಹಿಮಾಚಲ ಪ್ರದೇಶದ ಬಿಜೆಪಿ ಘಟಕದ ಅಧ್ಯಕ್ಷ ಸತ್ಪಾಲ್ ಸತ್ತೀ ಅವರು ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಳ್ಳದಂತೆ 48 ತಾಸು ನಿರ್ಬಂಧ ವಿಧಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಸಂದೇಶವೊಂದನ್ನು ಸತ್ತೀ ಅವರು ಓದಿದ್ದರು. ಇದರಲ್ಲಿ ರಾಹುಲ್ ವಿರುದ್ಧ ಆಕ್ಷೇಪಾರ್ಹ ಪದವೊಂದಿತ್ತು ಎಂಬ ಕಾರಣಕ್ಕೆ ನಿರ್ಬಂಧ ಹೇರಲಾಗಿದೆ. ಶನಿವಾರ ಬೆಳಗ್ಗೆ 10 ಗಂಟೆಯಿಂದ ಆದೇಶ ಜಾರಿಗೆ ಬರಲಿದೆ.
ಇದು ಅವಹೇಳನಕಾರಿ ಹಾಗೂ ಸಂಪೂರ್ಣ ಅನಪೇಕ್ಷಿತ ಎಂದು ಛೀಮಾರಿ ಹಾಕಿರುವ ಆಯೋಗ, ಯಾವುದೇ ರೀತಿಯ ಪ್ರಚಾರ, ಮಾಧ್ಯಮ ಸಂದರ್ಶನದಲ್ಲಿ ತೊಡಗದಂತೆ ಅವರಿಗೆ ಸೂಚನೆ ನೀಡಿದೆ. ಸತ್ತೀ ಅವರು ಸಂದೇಶವೊಂದನ್ನು ಓದಿದ್ದಾರೆಯೇ ವಿನಃ, ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.