ಕೋಲ್ಕತ್ತ (ಪಿಟಿಐ): ಕಾಂಗ್ರೆಸ್ ಸಂಸದ ಶಶಿ ತರೂರ್ ಕಳೆದ ವರ್ಷ ನೀಡಿದ್ದ ‘ಹಿಂದೂಪಾಕಿಸ್ತಾನ’ ಹೇಳಿಕೆ ಸಂಬಂಧ ಇಲ್ಲಿನ ಮೆಟ್ರೊಪಾಲಿಟನ್ ನ್ಯಾಯಾಲಯ ಮಂಗಳವಾರ ಅವರ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿದೆ.
ಕೇಂದ್ರದಲ್ಲಿ ಪುನಃ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ತಿದ್ದುಪಡಿ ಮಾಡಿ ‘ಹಿಂದೂ ಪಾಕಿಸ್ತಾನ’ ರಚಿಸಲು ಅವಕಾಶ ಮಾಡಿಕೊಡಬಹುದು ಎಂದು ತರೂರ್ ಹೇಳಿದ್ದರು. ಈ ಕುರಿತು ವಿವಾದ ಸೃಷ್ಟಿಯಾಗಿ, ತರೂರ್ ಕ್ಷಮೆ ಕೋರಬೇಕೆಂದು ಬಿಜೆಪಿ ಆಗ್ರಹಿಸಿತ್ತು.
ತರೂರ್ ಹೇಳಿಕೆಯಿಂದ ಜನರ ನಡುವಿನ ಸೌಹಾರ್ದಕ್ಕೆ ಧಕ್ಕೆಯಾಗಿದೆ ಎಂದು ವಕೀಲರಾದ ಸುಮಿತ್ ಚೌಧರಿ ದೂರು ಸಲ್ಲಿಸಿದ್ದರು.
ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ದೀಪಂಜನ್ ಸೇನ್ ಅವರು ಪ್ರಕರಣದ ಮುಂದಿನ ವಿಚಾರಣೆಯನ್ನು ಸೆ.24ಕ್ಕೆ ನಿಗದಿಪಡಿಸಿದ್ದಾರೆ.