ಪುಣೆ (ಪಿಟಿಐ): ನಕ್ಸಲರ ಜತೆ ಸಂಪರ್ಕ ಹೊಂದಿದ ಆರೋಪಕ್ಕಾಗಿ ಐವರು ಸಾಮಾಜಿಕ ಹೋರಾಟಗಾರರನ್ನು ಬಂಧಿಸಿರುವುದನ್ನು ಪುಣೆ ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.
ಬಹು ದೊಡ್ಡ ಸಂಚು ರೂಪಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಡಿಜಿಟಲ್ ಸಾಕ್ಷ್ಯವಿದೆ ಎಂದು ತಿಳಿಸಿದ್ದಾರೆ.
‘ಈ ಬಹುದೊಡ್ಡ ಸಂಚು ಬಯಲುಗೊಳಿಸುವ ಡಿಜಿಟಲ್ ಸಾಕ್ಷ್ಯ ನಮ್ಮ ಬಳಿ ಇದೆ. ಕಾರ್ಯಕರ್ತರನ್ನು ಯಾವ ರೀತಿಯಲ್ಲಿ ಒಗ್ಗೂಡಿಸಬೇಕು. ಭದ್ರತಾ ಪಡೆಗಳ ವಿರುದ್ಧ ಹೇಗೆ ಕಾರ್ಯಾಚರಣೆ ನಡೆಸಬೇಕು ಮತ್ತು ಯಾವ ರೀತಿಯ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಬೇಕು ಹಾಗೂ ಹಣವನ್ನು ಹೇಗೆ ಸಂಗ್ರಹಿಸಬೇಕು ಎನ್ನುವ ಕುರಿತು ರೂಪಿಸಿದ್ದ ತಂತ್ರಗಳ ಬಗ್ಗೆ ಸಾಕ್ಷ್ಯವಿದೆ’ ಎಂದು ಪುಣೆ ಪೊಲೀಸ್ ಕಮಿಷನರ್ ಕೆ. ವೆಂಕಟೇಶಂ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
’ಐವರನ್ನು ಗೃಹ ಬಂಧನದಲ್ಲಿರಿಸಿದ್ದರೂ ತನಿಖೆ ಮುಂದುವರಿಯಲಿದೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು. ನಮಗೆ ಅತ್ಯಂತ ಪ್ರಮುಖವಾದ ಕೆಲವು ಮಾಹಿತಿಗಳು ದೊರೆತಿವೆ’ ಎಂದು ಅವರು ತಿಳಿಸಿದ್ದಾರೆ.
’ಶಸ್ತ್ರಾಸ್ತ್ರಗಳನ್ನು ಯಾವ ಸ್ಥಳದಿಂದ ಸಂಗ್ರಹಿಸಬೇಕು ಮತ್ತು ಯಾವ ಮಾರ್ಗದಲ್ಲಿ ಸಾಗಿಸಬೇಕು ಎನ್ನುವ ಕುರಿತು ಚರ್ಚೆ ನಡೆಸಿರುವ ಬಗ್ಗೆ ಮಾಹಿತಿಗಳು ಲಭಿಸಿವೆ. ನಮ್ಮ ಬಳಿ ಎಲ್ಲ ರೀತಿಯ ಸಾಕ್ಷ್ಯಗಳಿದ್ದು,ನ್ಯಾಯಾಲಯದಲ್ಲಿ ನೀಡಲಾಗುವುದು’ ಎಂದು ವಿವರಿಸಿದ್ದಾರೆ.
ಪೂರ್ವ ನಿಯೋಜಿತ ಕೃತ್ಯ: ಜನವರಿ 1ರಂದು ಭೀಮಾ–ಕೋರೆಗಾಂವ್ದಲ್ಲಿ ನಡೆದ ಹಿಂಸಾಚಾರ ಪೂರ್ವ ನಿಯೋಜಿತ ಕೃತ್ಯ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಹಿಂಸಾಚಾರವನ್ನು ಸೃಷ್ಟಿಸಲು ಜನರಿಗೆ ಪ್ರಚೋದನೆ ನೀಡುವುದು ನಕ್ಸಲರ ಉದ್ದೇಶವಾಗಿತ್ತು. ಈ ಮೂಲಕ ಪ್ರಸ್ತುತ ಸರ್ಕಾರವನ್ನು ಉರುಳಿಸುವುದು ನಕ್ಸಲರ ಯೋಜನೆಯಾಗಿತ್ತು. ಹೀಗಾಗಿಯೇ, ಭೀಮಾ–ಕೋರೆಗಾಂವ್ನಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಲಾಯಿತು’ ಎಂದು ತಿಳಿಸಿದ್ದಾರೆ.