ರಾಯಚೂರು: ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕಾಡಾ) ಅಧ್ಯಕ್ಷ ಸ್ಥಾನಕ್ಕೆ ಸರ್ಕಾರವು ನೇಮಕ ಮಾಡಿರುವ ಮಸ್ಕಿ ಕ್ಷೇತ್ರದ ಬಿಜೆಪಿ ಮುಖಂಡ ಬಸನಗೌಡ ತುರ್ವಿಹಾಳ ಅವರು, ನೇಮಕಕ್ಕೆ ಅಸಮಾಧಾನ ತಾಳಿದ್ದಾರೆ.
ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಮುಂಬರುವ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ತಪ್ಪಿಸುವುದಕ್ಕಾಗಿ ಈ ನೇಮಕ ಮಾಡಲಾಗಿದೆ ಎನ್ನುವುದು ಬಸನಗೌಡ ಹಾಗೂ ಬೆಂಬಲಿಗರಿಗೆ ಮನದಟ್ಟಾಗಿದ್ದು, ಹುದ್ದೆ ಒಪ್ಪಿಕೊಳ್ಳಲು ಈಗಾಗಲೇ ನಿರಾಕರಣೆ ಶುರು ಮಾಡಿದ್ದಾರೆ.
ಕಾಡಾ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಮಾಹಿತಿ ನೀಡಿ ಸುದ್ದಿಗಾರರು ಪ್ರತಿಕ್ರಿಯೆ ಕೇಳಿದ್ದಕ್ಕೆ ‘ಅದು ನನಗೆ ಗೊತ್ತಿಲ್ಲ. ಈ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.