ನವದೆಹಲಿ: ರೈಲ್ವೆ ಕಾರ್ಯಾಚರಣೆ ಹೊರತಾದ ಸ್ವಚ್ಛತೆ, ಸಲಹೆ, ತರಬೇತಿ ಮುಂತಾದ ವಿಭಾಗಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ನೌಕರರ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಶೇಖರಿಸುವುದಾಗಿ ರೈಲ್ವೆ ಇಲಾಖೆ ಇದೇ ಮೊದಲ ಬಾರಿ ಹೇಳಿದೆ.
‘ಗುತ್ತಿಗೆದಾರರಿಂದ ಕಾರ್ಮಿಕ ಹಕ್ಕುಗಳ ಉಲ್ಲಂಘನೆ ಆದಲ್ಲಿ ಅವುಗಳ ಮೇಲೆ ಗಮನಹರಿಸಲು ಈ ದತ್ತಾಂಶ ನೆರವಾಗುತ್ತದೆ’ ಎಂದು ಹೊಸದಾಗಿ ರೂಪಿಸಲಾದ ಗುತ್ತಿಗೆಯ ಸಾಮಾನ್ಯ ನಿಯಮಗಳಲ್ಲಿ (ಜಿಸಿಸಿ) ತಿಳಿಸಲಾಗಿದೆ.
ಸೇತುವೆ, ಕಟ್ಟಡ ನಿರ್ಮಾಣ, ಗೇಜ್ ಪರಿವರ್ತನೆ ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಗುತ್ತಿಗೆ ನೌಕರರಿಗೆ ಜಿಸಿಸಿ ಅಡಿಯಲ್ಲಿ ಪ್ರತ್ಯೇಕ ಷರತ್ತು ಮತ್ತು ನಿಯಮಗಳನ್ನು ರೂಪಿಸಲು ರೈಲ್ವೆ ಮಂಡಳಿ ಮುಂದಾಗಿದೆ. ಗುರುತಿನ ಚೀಟಿ ನೀಡುವ ಪ್ರಸ್ತಾವವೂ ಈ ನಿಯಮದಲ್ಲಿದೆ.
‘ಕಾರ್ಮಿಕರಿಗೆ ಕನಿಷ್ಠ ಕೂಲಿ ಮತ್ತು ಇತರ ಸೌಲಭ್ಯಗಳು ಸಿಗುತ್ತಿವೆಯೇ ಎಂಬ ಮಾಹಿತಿಯೂ ಹೊಸ ವ್ಯವಸ್ಥೆಯಿಂದ ತಿಳಿಯಲಿದೆ. ಗುತ್ತಿಗೆ ಪಡೆದ ಎರಡು ವರ್ಷಗಳಲ್ಲಿ ಮೂರು ಬಾರಿ ಕಾರ್ಮಿಕ ಕಾನೂನನ್ನು ಉಲ್ಲಂಘಿಸಿದ್ದರೆ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುತ್ತದೆ ಮತ್ತು ಗುತ್ತಿಗೆಯನ್ನು ಅನೂರ್ಜಿತಗೊಳಿಸಲಾಗುತ್ತದೆ’ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.