ಮಂಡ್ಯ: ಪಾರ್ಶ್ವವಾಯುವಿಗೆ ತುತ್ತಾಗಿರುವ ನಟ ಗಡ್ಡಪ್ಪ (ಚನ್ನೇಗೌಡ) ಪಾಂಡವಪುರ ತಾಲ್ಲೂಕಿನ ನೊದೆಕೊಪ್ಪಲು ಗ್ರಾಮದ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ, ಕಿಡಿಗೇಡಿಗಳು ಅವರು ಮೃತಪಟ್ಟಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಕುಟುಂಬದ ಬೇಸರಕ್ಕೆ ಕಾರಣವಾಗಿದೆ.
ಬಾಯಿಗೆ ಪಾರ್ಶ್ವವಾಯು ಉಂಟಾಗಿರುವ ಕಾರಣ ಅವರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು ಔಷಧ ಸೇವಿಸುತ್ತಿದ್ದಾರೆ.
ಗಡ್ಡಪ್ಪ ಮೃತಪಟ್ಟಿದ್ದಾರೆ ಎಂದು ವೆಬ್ನ್ಯೂಸ್ ತಾಣವೊಂದು ಸುಳ್ಳು ಸುದ್ದಿ ಪ್ರಕಟಿಸಿದೆ. ನೂರಾರು ಜನರು ಅದನ್ನು ಹಂಚಿಕೊಂಡಿದ್ದಾರೆ.
‘ನಮ್ಮ ತಂದೆ ಮನೆಯ ಸಮೀಪ ಓಡಾಡುತ್ತಿದ್ದು ಊಟ, ತಿಂಡಿ ಮಾಡುತ್ತಿದ್ದಾರೆ. ನರದ ಸಮಸ್ಯೆ ಇದ್ದು ಶೀಘ್ರ ಮಾತು ಬರುವುದಾಗಿ ವೈದ್ಯರು ಭರವಸೆ ಕೊಟ್ಟಿದ್ದಾರೆ. ಆದರೆ, ಕೆಲವರು ಕರೆ ಮಾಡಿ ಮೃತಪಟ್ಟಿರುವ ಬಗ್ಗೆ ವಿಚಾರಿಸುತ್ತಿರುವುದು ನೋವಾಗಿದೆ’ ಎಂದು ಅವರ ಪುತ್ರಿ ಯಶೋದಾ ‘ಪ್ರಜಾವಾಣಿ’ಗೆ ತಿಳಿಸಿದರು.