ಸಕಲೇಶಪುರ: ಅರಸೀಕೆರೆ ತಾಲ್ಲೂಕಿನ ಮಾಲೇಕಲ್ಲು ತಿರುಪತಿ ನಿವಾಸಿ 73 ವರ್ಷದ ಉಮಾಪತಿ ಮೊದಲಿಯಾರ್ ಮತದಾನ ಜಾಗೃತಿಗಾಗಿ ಚಿಕ್ಕಮಗಳೂರಿನಿಂದ ದಕ್ಷಿಣ ಕನ್ನಡ, ಬೆಂಗಳೂರು ವರೆಗೆ ನೆತ್ತಿ ಸುಡುವ ಬಿಸಿಲಿನಲ್ಲಿ ಸೈಕಲ್ ಜಾಥಾ ನಡೆಸುತ್ತಿದ್ದಾರೆ.
ಮಾರ್ಚ್ 25ರಂದು ಚಿಕ್ಕಮಗಳೂರಿನಿಂದ ಹೊರಟು, ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿಘಾಟ್ ಮಾರ್ಗವಾಗಿ ಧರ್ಮಸ್ಥಳ, ಬೆಳ್ತಂಗಡಿ, ಮಂಗಳೂರು, ಬಂಟ್ವಾಳ, ಗುಂಡ್ಯಾ ಭಾಗದಲ್ಲಿ ಜಾಗೃತಿ ಮೂಡಿಸಿದ್ದಾರೆ. ಶಿರಾಡಿ ಘಾಟ್ ಮಾರ್ಗವಾಗಿ ಸಕಲೇಶಪುರಕ್ಕೆ ಬುಧವಾರ ಮಧ್ಯಾಹ್ನ ಆಗಮಿಸಿದರು.
ತಾಲ್ಲೂಕಿನ ಹೆಗ್ಗದ್ದೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ವಿನಂತಿ ಮಾಡಿಕೊಂಡರು. ನಂತರ ಪಟ್ಟಣದ ಸೆಸ್ಕ್ ಕಚೇರಿ ಆವರಣ, ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆ ಸಮೀಪದ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚಿ ಜಾಗೃತಿ ಅಭಿಯಾನ ನಡೆಸಿದರು.
ಇವರ ಸೈಕಲ್ನಲ್ಲಿ ‘ಶತ ಪ್ರತಿಶತಃ ಮತದಾನ’ ಎಂಬ ಘೋಷಣೆಯನ್ನು ಬರೆದುಕೊಂಡಿದ್ದಾರೆ. ಉಮಾಪತಿಯವರು ಈವರೆಗೆ ಏಕಾಂಗಿಯಾಗಿ ಸೈಕಲ್ ತುಳಿಯುತ್ತಲೇ ಹಲವು ಜಾಗೃತಿ ಅಭಿಯಾನಗಳನ್ನು ಮಾಡಿದ್ದಾರೆ. 11 ರಾಜ್ಯಗಳನ್ನು ಸುತ್ತಿದ್ದಾರೆ.