ಮಾಲೂರು: ‘ಬಿಜೆಪಿ ಪಕ್ಷದ ಸ್ನೇಹಿತರಿಂದ ನನಗೂ ದಿನ ಕರೆ ಬರುತ್ತಿರುತ್ತದೆ. ಆದರೆ ನಾನು ನೋ ಸೇಲ್ ಎಂದು ಹೇಳಿದ್ದು, ನನ್ನ ತಂಟೆಗೆ ಬರಬೇಡಿ ಎನ್ನುವ ಮೂಲಕ ನಾನು ಕಾಂಗ್ರೆಸ್ನ ನಂಬಿಕಸ್ಥ ಶಾಸಕನಾಗಿದ್ದೇನೆ’ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ತಾಲ್ಲೂಕಿನ ಅಬ್ಬೇನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಾರೋಹಳ್ಳಿ ಗೇಟ್ ಬಳಿಯಿಂದ ಬಾವನಹಳ್ಳಿ ಗ್ರಾಮದವರೆಗೆ ₹ 5 ಕೋಟಿ ವೆಚ್ಚದ ಸುಮಾರು 11 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
‘ಬಿಜೆಪಿಗೆ ಕೋಲಾರ ಜಿಲ್ಲೆಯಲ್ಲಿ ಪಕ್ಷೇತರ ಶಾಸಕರೊಬ್ಬರು ಸೇಲ್ ಆಗಿದ್ದಾರೆ. ಇನ್ನೂ ಯಾರು ಆಗುವುದಿಲ್ಲ. ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ 5 ವರ್ಷ ಆಡಳಿತ ನಡೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಈ ಹಿಂದೆ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಮುಖಂಡರು ಜೈಲು ಸೇರಿ ದೇಶವೆ ಕರ್ನಾಟಕದ ಕಡೆ ನೋಡುವ ಹಾಗೆ ಮಾಡಿದ್ದರು. ಅವರಿಗೆ ಅಧಿಕಾರದ ವ್ಯಾಮೋಹ ಹೆಚ್ಚಾಗಿದೆ’ ಎಂದು ಆರೋಪಿಸಿದರು.