ಬೆಂಗಳೂರು: ಹೈಕೋರ್ಟ್ ತೀರ್ಪಿನ ಅನ್ವಯ ಕೆಪಿಎಸ್ಸಿ ಪ್ರಕಟಿಸಿದ 1998ನೇಗೆಜೆಟೆಡ್ ಪ್ರೊಬೇಷನರಿ ಸಾಲಿನ ಅಂತಿಮ ಆಯ್ಕೆ ಪಟ್ಟಿಯಂತೆ ಹುದ್ದೆ ಬದಲಾಗುವ ಅಧಿಕಾರಿಗಳ ವೇತನ, ಬಡ್ತಿಗೆ ಸಂಬಂಧಿಸಿ ವಿಶೇಷ ನಿಯಮಗಳನ್ನು ರೂಪಿಸಲು ಸರ್ಕಾರ ಮುಂದಡಿ ಇಟ್ಟಿದೆ.
‘ಕರ್ನಾಟಕ ನಾಗರಿಕ ಸೇವೆ (1998 ಗೆಜೆಟೆಡ್ ಪ್ರೊಬೇಷನರಿಗಳು) ಡಿಕ್ಲರೇಷನ್ ಆಫ್ ಪ್ರೊಬೇಷನ್ ಆ್ಯಂಡ್ ಫಿಕ್ಸೇಷನ್ ಆಫ್ ಸ್ಯಾಲರಿ) ವಿಶೇಷ ನಿಯಮ– 2020’ರ ಕರಡು ರೂಪಿಸಿರುವ ರಾಜ್ಯ ಸರ್ಕಾರ ಸೋಮವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಈ ನಿಯಮದ ಪ್ರಕಾರ ಹುದ್ದೆ ಬದಲಾದ ಅಧಿಕಾರಿಗಳಿಗೆ, ಹಳೆ ಹುದ್ದೆಯಲ್ಲಿ ಪ್ರೊಬೇಷನರಿ ಅವಧಿ ಮುಗಿಸಿರುವುದರಿಂದ, ಹೊಸ ಹುದ್ದೆ ಯಲ್ಲಿ ಪ್ರೊಬೇಷನರಿ ಅವಧಿ ಅಗತ್ಯ ಇಲ್ಲ. ಆದರೆ, ಮುಂದಿನ ಬಡ್ತಿ ವೇಳೆಗೆ ಇಲಾಖಾ ಪರೀಕ್ಷೆಗಳನ್ನು ಪೂರ್ಣಗೊಳಿಸಬೇಕು.
ಅಲ್ಲದೆ, ಹೊಸ ಹುದ್ದೆಗೆ ಬದಲಾಗುವ ಸಂದರ್ಭದಲ್ಲಿ, ಹಳೆ ಹುದ್ದೆಯಲ್ಲಿ ಪಡೆಯುತ್ತಿದ್ದ ವೇತನಕ್ಕೆ ಸರಿಸಮನಾದ ವೇತನ ನಿಗದಿಪಡಿಸಲು ಕೂಡಾ ವಿಶೇಷ ನಿಯಮ ಅವಕಾಶ ಕಲ್ಪಿಸಿದೆ.
ಕರಡು ನಿಯಮಕ್ಕೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗೆ ಸಲ್ಲಿಸಬಹುದು.