ಶಿಮ್ಲಾ: ಹತ್ತು ದಿನಗಳಿಂದ ಉದ್ಭವಿಸಿರುವ ಕುಡಿಯುವ ನೀರಿನ ಕೊರತೆ ಪರಿಶೀಲಿಸಲು ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯೊಬ್ಬರು (ಹಂಗಾಮಿ) ನಡುರಾತ್ರಿ ಖುದ್ದಾಗಿ ನಗರದ ಗಲ್ಲಿಗಳನ್ನು ಸುತ್ತಿದ ಅಪರೂಪದ ಪ್ರಸಂಗ ಪ್ರವಾಸಿಗರ ಸ್ವರ್ಗ ಎಂದು ಪ್ರಸಿದ್ಧಿ ಪಡೆದಿರುವ ಹಿಮಾಚಲ ಪ್ರದೇಶದಿಂದ ವರದಿಯಾಗಿದೆ.
ಹಿಮಾಚಲ ಪ್ರದೇಶ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಗುರುವಾರ ರಾತ್ರಿ ಮೂರು ಗಂಟೆಗೆ ಶಿಮ್ಲಾ ಪುರಸಭೆಗೆ ಹಠಾತ್ ಭೇಟಿ ನೀಡಿದರು.
ದೂರು ಪುಸ್ತಕ ಪರಿಶೀಲಿಸಿದ ಅವರು, ನೀರಿನ ಕೊರತೆ ಬಗ್ಗೆ ಜನರು ದಾಖಲಿಸಿದ ದೂರುಗಳ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆದರು.
ಯಾವ ಯಾವ ಪ್ರದೇಶಗಳಿಗೆ ನೀರು ಪೂರೈಕೆಯಾಗಿಲ್ಲ ಎಂಬ ಮಾಹಿತಿ ಪಡೆದ ಅವರು, ನಗರದ ವಿವಿಧ ಗಲ್ಲಿಗಳಲ್ಲಿ ತಿರುಗಿ ಪರಿಸ್ಥಿತಿ ಅವಲೋಕಿಸಿದರು. ಮರುದಿನ ನಗರದ ವಿವಿಧ ಬಡಾವಣೆಗಳಿಗೆ ಟ್ಯಾಂಕರ್ಗಳಲ್ಲಿ ಪೊಲೀಸರ ಭದ್ರತೆಯಲ್ಲಿ ಕುಡಿಯುವ ನೀರು ಪೂರೈಸಲಾಗಿದೆ.
ಜನರ ಸಮಸ್ಯೆ ತಿಳಿಯಲು ತಡರಾತ್ರಿ ಬೀದಿಗಿಳಿದ ನ್ಯಾಯಮೂರ್ತಿಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.