ಬೆಂಗಳೂರು: ಪಿಎಸ್ಐ ನೇಮಕಾತಿ ಪ್ರಶ್ನೆಪತ್ರಿಕೆ ಸೋರಿಕೆಗೆ ಯತ್ನಿಸಿದ ಆರೋಪದಡಿ ಸಿಸಿಬಿ ಪೊಲೀಸರು ಬಂಧಿಸಿರುವ ಸಹೋದರರ ವಿರುದ್ಧ ಶನಿವಾರ ಮತ್ತೊಂದು ಪ್ರಕರಣ ದಾಖಲಾಗಿದೆ.
‘ಕೆಲಸ ಕೊಡಿಸುವುದಾಗಿ ಹೇಳಿದ್ದ ಬಸವರಾಜ, ಆತನ ಸಹೋದರ ಹೋಳಿಯಪ್ಪ ಮತ್ತು ಶಿವಕುಮಾರ್, ₹10 ಲಕ್ಷ ಹಾಗೂ ಅಸಲಿ ದಾಖಲೆಗಳನ್ನು ಪಡೆದುಕೊಂಡು ವಂಚಿಸಿದ್ದಾರೆ’ ಎಂದು ಮುರಳಿ ಎಂಬುವರು ದೂರು ನೀಡಿದ್ದಾರೆ. ಮೂವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದೇವೆ’ ಎಂದು ಮಹಾಲಕ್ಷ್ಮಿಪುರ ಠಾಣೆ ಪೊಲೀಸರು ಹೇಳಿದರು.
‘ಮೂವರು ಆರೋಪಿಗಳು ಸಿಸಿಬಿ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಅವರನ್ನು ನಮ್ಮ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಿದ ಬಳಿಕ ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ’ ಎಂದರು.
ಆರ್ಎಫ್ಒ ಹುದ್ದೆ ಕೊಡಿಸುವುದಾಗಿ ವಂಚನೆ: ‘ದೂರುದಾರರ ಪತ್ನಿಯು ವಲಯ ಅರಣ್ಯಾಧಿಕಾರಿ (ಆರ್ಎಫ್ಒ) ಹುದ್ದೆಯ ಪೂರ್ವಭಾವಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವುದನ್ನು ತಿಳಿದುಕೊಂಡಿದ್ದ ಆರೋಪಿಗಳು, 2018ರಲ್ಲಿ ಅವರನ್ನು ಸಂಪರ್ಕಿಸಿದ್ದರು. ಮುಂದಿನ ಹಂತದಲ್ಲಿ ಆಯ್ಕೆ ಮಾಡಿಸುವುದಾಗಿ ಹಾಗೂ ಆರ್ಎಫ್ಒ ಹುದ್ದೆ ಸಿಗದಿದ್ದರೆ ಬೇರೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ₹20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಅವರ ಮಾತು ನಂಬಿದ್ದ ದೂರುದಾರ, ಮುಂಗಡವಾಗಿ ₹10 ಲಕ್ಷ ಕೊಟ್ಟಿದ್ದರು. ಪತ್ನಿಯ ಶೈಕ್ಷಣಿಕ ದಾಖಲೆಗಳ ಅಸಲಿ ಪ್ರತಿಗಳನ್ನೂ ಆರೋಪಿಗಳಿಗೆ ನೀಡಿದ್ದರು. ಅದಾದ ನಂತರ ಆರೋಪಿಗಳು, ಸಂಪರ್ಕಕ್ಕೆ ಸಿಕ್ಕಿರಲಿಲ್ಲ’ ಎಂದರು.