ಅಗರ್ತಲಾ: ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 297 ಅಭ್ಯರ್ಥಿಗಳಲ್ಲಿ 22 ಅಭ್ಯರ್ಥಿಗಳು ಅಪರಾಧ ಹಿನ್ನೆಲೆಯುಳ್ಳವರು ಇದ್ದಾರೆ.
ಅದರಲ್ಲೂ 17 ಅಭ್ಯರ್ಥಿಗಳು ದಂಗೆ, ಕೊಲೆ, ಬೆದರಿಕೆ ಹಾಗೂ ಅತ್ಯಾಚಾರದಂಥ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಪ್ರಜಾಪ್ರಭುತ್ವ ಸುಧಾರಣೆಗೆ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಯೊಂದು ತಿಳಿಸಿದೆ.
ಈ ಅಪರಾಧಿ ಹಿನ್ನೆಲೆಯುಳ್ಳ ಅಭ್ಯರ್ಥಿಗಳಲ್ಲಿ ಒಂಬತ್ತು ಬಿಜೆಪಿ, ಮೂವರು ಕಾಂಗ್ರೆಸ್, ಇಬ್ಬರು ಐಪಿಎಫ್ಟಿ, ಒಬ್ಬರು ತೃಣಮೂಲ ಕಾಂಗ್ರೆಸ್ ಹಾಗೂ ಉಳಿದವರು ಸ್ವತಂತ್ರ ಅಭ್ಯರ್ಥಿಗಳು.
ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಸುಭಾಲ್ ಬೌಮಿಕ್, ರತನ್ ಲಾಲ್ ನಾಥ್ ಮತ್ತು ಸುದೀಪ್ ರಾಯ್ ಬರ್ಮನ್, ಐಪಿಎಫ್ಟಿ ನಾಯಕರಾದ ಧೈರೇಂದ್ರ ದೇಬರ್ಮ, ಧನಂಜಯ್ ತ್ರಿಪುರ ಮತ್ತು ಕಾಂಗ್ರೆಸ್ನ ಗೋಪಾಲ್ ಚಂದ್ರ ರಾಯ್ ಇದ್ದಾರೆ.
ಜತೆಗೆ, 47 ಅಭ್ಯರ್ಥಿಗಳು ಮಾತ್ರ ಎಂಟನೇ ತರಗತಿ ಉತ್ತೀರ್ಣರಾಗಿದ್ದಾರೆ. 13 ಅಭ್ಯರ್ಥಿಗಳು ಐದನೇ ತರಗತಿವರೆಗೆ ಓದಿದ್ದಾರೆ. ಕಣದಲ್ಲಿ 35 ಅಭ್ಯರ್ಥಿಗಳು ಕೋಟ್ಯಾಧೀಶರು ಇದ್ದಾರೆ. ₹11 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಬಿಜೆಪಿಯ ಜಿಶ್ಣು ದೇವ್ ವರ್ಮನ್ ಶ್ರೀಮಂತ ಅಭ್ಯರ್ಥಿಗಳಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ.
ತ್ರಿಪುರಾ ವಿಧಾನಸಭಾ ಚುನಾವಣೆ ಫೆಬ್ರುವರಿ 18ರಂದು ನಡೆಯಲಿದೆ.ಮಾರ್ಚ್ 3ರಂದು ಫಲಿತಾಂಶ ಹೊರಬೀಳಲಿದೆ.