ಚಿತ್ತಾಪುರ (ಕಲಬುರ್ಗಿ ಜಿಲ್ಲೆ): ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಆಸ್ತಿಯನ್ನು ಸಿಬಿಐನಿಂದ ತನಿಖೆ ಮಾಡಿಸುತ್ತೇವೆ’ ಎಂದು ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ ಶನಿವಾರ ಗುಡುಗಿದರು.
ಪಟ್ಟಣದಲ್ಲಿ ಬಿಜೆಪಿ ಆಯೋಜಿಸಿದ್ದ ಸನ್ಮಾನ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಕಲಬುರ್ಗಿಯಲ್ಲಿ ಬುದ್ಧ ವಿಹಾರವನ್ನು ನಿರ್ಮಿಸಲು ₹900 ಕೋಟಿ ದೇಣಿಗೆ ಹಣ ಬಂದಿದೆ. ಅದಕ್ಕೆ ಖರ್ಚಾಗಿದ್ದು ₹35 ಕೋಟಿ ಮಾತ್ರ. ಉಳಿದ ಹಣ ಎಲ್ಲಿಗೆ ಹೋಯಿತು’ ಎಂದು ಪ್ರಶ್ನಿಸಿದರು.
‘ಖರ್ಗೆ ಅವರ ಕುಟುಂಬದವರೇ ಸದಸ್ಯರಾಗಿರುವ ಟ್ರಸ್ಟ್ ರಚಿಸಿಕೊಂಡಿದ್ದಾರೆ. ಅಲ್ಲದೇ ಅವರ ಕುಟುಂಬದವರು ಸಣ್ಣ ರೈತರು ಎಂದು ಭೂಮಿ ಪಡೆದಿರುವ ದಾಖಲೆ ಇದೆ. ಈ ಕುರಿತು ಸಿಬಿಐ ತನಿಖೆಯಿಂದ ಸತ್ಯ ಬಯಲಿಗೆ ಎಳೆಯುತ್ತೇವೆ’ ಎಂದು ಹೇಳಿದರು.