ನವದೆಹಲಿ : ಜಿಎಸ್ಟಿ ಮರುಪಾವತಿ ಪ್ರಕ್ರಿಯೆ ತ್ವರಿತಗೊಳಿಸುವ ಬಗ್ಗೆ ವಾಣಿಜ್ಯ ಮತ್ತು ಹಣಕಾಸು ಸಚಿವಾಲಯ ಮಾತುಕತೆ ನಡೆಸುತ್ತಿವೆ ಎಂದು ವಿದೇಶಿ ವ್ಯಾಪಾರದ ಹೆಚ್ಚುವರಿ ಮಹಾನಿರ್ದೇಶಕ ಎನ್.ಕೆ. ಶ್ರೀವಾಸ್ತವ್ ಹೇಳಿದ್ದಾರೆ.
ಜಿಎಸ್ಟಿಯಲ್ಲಿ ರಫ್ತುದಾರರಿಗೆ ₹ 14 ಸಾವಿರ ಕೋಟಿ ಮರುಪಾವತಿ ಬಾಕಿ ಉಳಿದಿದೆ.
ಇಲ್ಲಿ ನಡೆದ ವಾಣಿಜ್ಯೋದ್ಯಮ ಸಂಘದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಸರಿಯಾಗಿ ಲೆಕ್ಕಪತ್ರ ಮಾಹಿತಿ ನೀಡದೇ ಇರುವುದು ಸಹ ಮರುಪಾವತಿ ವಿಳಂಬಕ್ಕೆ ಕಾರಣ’ ಎಂದು ಅವರು ರಫ್ತುದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಗಮನ: ರಫ್ತು ವಹಿವಾಟಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ನಿರ್ದಿಷ್ಟ ವಲಯದ ಬಗ್ಗೆ ಗಮನ ನೀಡಲು ಆರಂಭಿಸಿದೆ.
ಈ ಸಂಬಂಧ ಸಮಿತಿಯೊಂದನ್ನು ರಚಿಸಲಾಗಿದ್ದು, ವಲಯವಾರು ರಫ್ತು ಸಾಮರ್ಥ್ಯದ ಪರಿಶೀಲನೆ ನಡೆಸಲಾಗುವುದು ಎಂದು ಶ್ರೀವಾಸ್ತವ್ ತಿಳಿಸಿದ್ದಾರೆ.