ಕೊಚ್ಚಿ: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿನಡೆದ ಹಿಂಸಾಚಾರ ಆರೋಪಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಶಬರಿಮಲೆ ಕರ್ಮ ಸಮಿತಿ ಸದಸ್ಯರನ್ನು, ಪ್ರತಿಭಟನಾಕಾರರನ್ನು ಬಂಧಮುಕ್ತಗೊಳಿಸುವುದಕ್ಕಾಗಿ ಶಬರಿಮಲೆ ಕರ್ಮ ಸಮಿತಿ ಶತಂ ಸಮರ್ಪಯಾಮಿ ಎಂಬ ಚಾಲೆಂಜ್ ಆರಂಭಿಸಿತ್ತು.
ಜೈಲಿನಲ್ಲಿರುವವರನ್ನು ಬಂಧಮುಕ್ತಗೊಳಿಸುವುದಕ್ಕಾಗಿ ₹100 ಸಂಭಾವನೆ ನೀಡಬೇಕು ಎಂಬುದೇ ಶತಂ ಸಮರ್ಪಯಾಮಿ ಚಾಲೆಂಜ್. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ನಡೆದಿತ್ತು.
ಅದೇ ವೇಳೆ ಕೇರಳ ಸರ್ಕಾರದ ಬೆಂಬಲಿಗರು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ₹100 ಸಂಭಾವನೆ ನೀಡಿ ಎಂದು ಅಭಿಯಾನವನ್ನು ಆರಂಭಿಸಿದ್ದು, ಸಂಘ ಪರಿವಾರದ ಶತಂ ಸಮರ್ಪಯಾಮಿ ಚಾಲೆಂಜ್ಗೆ ಸವಾಲಾಗಿ ಪರಿಣಮಿಸಿದೆ.
ಪರಿಹಾರ ನಿಧಿಗೆ ಹಣ ನೀಡಿದಾಗ ಸಿಗುವ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವ ಮೂಲಕ ಶತಂ ಸಮರ್ಪಯಾಮಿ ಚಾಲೆಂಜ್ ಹ್ಯಾಶ್ಟ್ಯಾಗ್ ಕೂಡಾ ಟ್ರೆಂಡ್ ಆಯಿತು.
ಸಿಎಂಡಿಆರ್ಎಫ್ (ಮುಖ್ಯಮಂತ್ರಿಗಳ ಪರಿಹಾರ ನಿಧಿ) ಲೆಕ್ಕ ಪ್ರಕಾರ ಭಾನುವಾರದವರೆಗೆ ₹3211.12 ಕೋಟಿ ಸಂಗ್ರಹವಾಗಿದೆ.ಶನಿವಾರ ಶತಂ ಸಮರ್ಪಯಾಮಿ ಟ್ರೆಂಡ್ ಆಗುತ್ತಿದ್ದಂತೆಪರಿಹಾರ ನಿಧಿಗೆ ಸಂಗ್ರಹವಾದ ಮೊತ್ತ ₹3.14 ಲಕ್ಷ ಎಂದು ಸಿಎಂಡಿಆರ್ಎಫ್ ಮಾಹಿತಿ ನೀಡಿರುವುದಾಗಿ ದೇಶಾಭಿಮಾನಿ ಪತ್ರಿಕೆ ವರದಿ ಮಾಡಿದೆ.
'ಶತಂ ಸಮರ್ಪಯಾಮಿ ಸಂಭಾವನೆ ಸಿಎಂ ಪರಿಹಾರ ನಿಧಿಗೆ' :ಸುರೇಂದ್ರನ್ ಕಿಡಿ
ಶಬರಿಮಲೆ ಕರ್ಮ ಸಮಿತಿ ಆಹ್ವಾನ ಮಾಡಿದ ಶತಂ ಸಮರ್ಪಯಾಮಿ ಚಾಲೆಂಜ್ ಮೂಲಕ ಸಿಎಂ ಪರಿಹಾರ ನಿಧಿಗೆ ಸಂಭಾವನೆ ನೀಡಿ ಎಂದು ಕೆ.ಸುರೇಂದ್ರನ್ ಮತ್ತು ಶಶಿಕಲಾ ಅವರ ಫೋಟೊದೊಂದಿಗೆ ಸಿಎಂ ಪರಿಹಾರ ನಿಧಿಯ ಬ್ಯಾಂಕ್ ಖಾತೆ ನಂಬರ್ ನೀಡಿ ಹರಿಯಬಿಟ್ಟ ಸಂದೇಶ ಇದೆಲ್ಲದ್ದಕ್ಕೂ ಕಾರಣ ಎಂದು ಬಿಜೆಪಿ ಆರೋಪಿಸಿದೆ.
ಶತಂ ಸಮರ್ಪಯಾಮಿ ಚಾಲೆಂಜ್ನಲ್ಲಿ ಭಾಗವಹಿಸಿ ಹಣ ಕಳಿಸಿದ್ದು ಸಿಎಂ ಪರಿಹಾರ ನಿಧಿಗೆ ಜಮೆ ಆಗಿದೆ ಎಂಬ ಸುದ್ದಿ ಬಿತ್ತರವಾಗುತ್ತಿದ್ದಂತೆ ಸುಳ್ಳು ಸಂದೇಶಗಳ ಬಗ್ಗೆ ಜನರು ಜಾಗೃತರಾಗಿರಿ ಎಂದು ಹೇಳಿ ಹಣ ವರ್ಗಾವಣೆ ಮಾಡಬೇಕಾದ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ಕೆ. ಸುರೇಂದ್ರನ್ ಫೇಸ್ಬುಕ್ ಬರಹವೊಂದನ್ನು ಪ್ರಕಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.