ಬೆಂಗಳೂರು: ಕೆಂಗೇರಿ ಬಳಿಯ ಸೋಂಪುರದ ಬಸವೇಶ್ವರ ಸ್ವಾಮಿ ದೇವಾಲಯದ 9ನೇ ವಾರ್ಷಿಕೋತ್ಸವದ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಕಡಲೆಕಾಯಿ ಪರಿಷೆ ವಿಜೃಂಭಣೆಯಿಂದ ಜರುಗಿತು.
ಜಾತ್ರೆಯ ಪ್ರಯುಕ್ತ ದೇವಾಲಯವನ್ನು ವಿವಿಧ ಬಗೆಗಳ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಬಸವನ ಮೂರ್ತಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕ ಹಾಗೂ ಕಡಲೆಕಾಯಿ ಅಭಿಷೇಕವನ್ನು ನೆರವೇರಿಸಲಾಯಿತು. ತುರಹಳ್ಳಿ, ಕೆಂಗೇರಿ, ಕರಿಯನಪಾಳ್ಯ, ಕೋನಸಂದ್ರ, ಚನ್ನಸಂದ್ರ, ಶ್ರೀನಿವಾಸಪುರ, ಹೆಮ್ಮಿಗೆಪುರ ಹಾಗೂ ಕೆ.ಗೊಲ್ಲಹಳ್ಳಿಯ ನೂರಾರು ಮಂದಿ ಪಾಲ್ಗೊಂಡಿದ್ದರು.
60 ವಸಂತಗಳನ್ನು ಪೂರೈಸಿದ 1,080 ರೈತ ದಂಪತಿಗಳಿಗೆ ಕನಕಪುರದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಅವರ ಸಮ್ಮುಖದಲ್ಲಿ ಷಷ್ಟ್ಯಬ್ದಿ ಆಚರಿಸಲಾಯಿತು. ಅವರಿಗೆ ರೇಷ್ಮೆ ಪಂಚೆ ಹಾಗೂ ಸೀರೆಯನ್ನು ಉಡುಗೊರೆಯಾಗಿ ನೀಡಿ ಗೌರವಿಸಲಾಯಿತು.
ಪರಿಷೆಗೆ ಚಾಲನೆ ನೀಡಿದ ಕೇಂದ್ರ ಸಚಿವ ಅನಂತ್ಕುಮಾರ್, ‘ಬಸವನಗುಡಿಯ ಕಡಲೆಕಾಯಿ ಪರಿಷೆಯಂತೆ ಸೋಂಪುರದ ಪರಿಷೆಯೂ ಪ್ರಸಿದ್ಧಿ ಪಡೆದಿದೆ. ಜಾತ್ರೆಗಳು ಗ್ರಾಮೀಣ ಸೊಗಡನ್ನು ಹೇಳುತ್ತವೆ. ಆದರೆ, ನಗರೀಕರಣದ ಪ್ರಭಾವದಿಂದ ಜಾತ್ರೆಗಳು ಕಡಿಮೆ ಆಗುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.