ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೂಲಿಯಾಳಾಗಿ ದುಡಿದವರ ‘ಸಾಮೂಹಿಕ ಕೃಷಿ’ಯ ಯಶೋಗಾಥೆ: ನಳನಳಿಸುತ್ತಿವೆ 77 ರಾಗಿತಳಿ

Published 25 ಮೇ 2024, 0:31 IST
Last Updated 25 ಮೇ 2024, 0:31 IST
ಅಕ್ಷರ ಗಾತ್ರ
24 ವರ್ಷಗಳ ಹಿಂದೆ ಕೇವಲ 10 ರೂಪಾಯಿ ದಿನಗೂಲಿಗೆ ಹೋಗುತ್ತಿದ್ದ ನಾರಿಯರು ಇಂದು ಅರ್ಧ ಎಕರೆ ಜಮೀನನ್ನು ಲೀಸ್‌ಗೆ ಪಡೆದು 77 ರಾಗಿ ತಳಿಯನ್ನು ಉಳಿಸಿ ಬೆಳೆಸಲು ಕೈಜೋಡಿಸಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಮತ್ತಿಗಟ್ಟಿಯ ವಿನಾಯಕ ಸ್ತ್ರೀ ಶಕ್ತಿ ಸಂಘದ ಮೂಲಕ ಹಲವು ಅಡ್ಡಿ ಆತಂಕಗಳನ್ನು ಮೆಟ್ಟಿನಿಂತು ಸಿರಿಧಾನ್ಯದ ಜೊತೆಗೆ ರಾಗಿಯ 77 ತಳಿಗಳ ಬೀಜ ಬೆಳೆದು ಗಮನ ಸೆಳೆದಿದ್ದಾರೆ.

ಕೂಲಿಯಾಳಾಗಿ ದುಡಿದವರು ಜಮೀನನ್ನು ಲೀಸ್‌ಗೆ ಪಡೆದು ಸಾವಯವ ಪದ್ಧತಿಯಲ್ಲಿ ಸಿರಿಧಾನ್ಯ ಬೆಳೆದು ಎಲ್ಲರೂ ಗಮನ ಸೆಳೆಯುವಂತೆ ಮಾಡಿದ್ದಾದರೂ ಹೇಗೆ ಎಂಬುದನ್ನು ವಿನಾಯಕ ಸ್ತ್ರೀ ಶಕ್ತಿ ಸಂಘದ ಸಂಚಾಲಕಿ ರತ್ನಾ ಪ್ರಕಾಶ ಹೊಸಳ್ಳಿ ಇಲ್ಲಿ ವಿವರಿಸಿದ್ದಾರೆ.

’ರಾಗಿಯಲ್ಲಿ ಇಷ್ಟೊಂದು ತಳಿಗಳಿವೆ ಅನ್ನೋದೇ ನನಗೆ ಗೊತ್ತಿರಲಿಲ್ಲ. ನಮ್ಮ ಸಂಘದ ಮಹಿಳೆಯರ 20 ವರ್ಷದ ಸಾಮೂಹಿಕ ಕೃಷಿ, ಸಾಧನೆ ಕಂಡ ಸಹಜ ಸಮೃದ್ಧಿಯವರು ರಾಗಿ ತಳಿಗಳ ಬೀಜವನ್ನು ನೀಡಿ ಬೀಜಕ್ಕಾಗಿಯೇ ಬೆಳೆದುಕೊಡಿ ಎಂದು ಕೇಳಿಕೊಂಡಾಗ ನಮಗೆ ಇಲ್ಲವೆನ್ನಲಾಗಲಿಲ್ಲ. ಅಷ್ಟರಲ್ಲಾಗಲೇ ನಾವು ಗೇಣಿ ಪಡೆದ ಜಮೀನಿನಲ್ಲಿ ಸಿರಿಧಾನ್ಯ ಬೆಳೆಯಲು ಆರಂಭಿಸಿ ಸ್ವಾವಲಂಬನೆಯ ಹಾದಿ ತುಳಿದಿದ್ದೆವು. ಅದೇ ಸಂದರ್ಭದಲ್ಲಿ ಅಂದರೆ 2021ರಲ್ಲಿ ಸಹಜ ಸಮೃದ್ಧದವರು  77 ತಳಿ ರಾಗಿಯನ್ನು ಬೀಜಕ್ಕಾಗಿ ಬೆಳೆಯುವ ಕಾಯಕವನ್ನು ಒಪ್ಪಿಸಿದ್ದು, ನಮ್ಮ ಸಂಘ ಅದನ್ನು ಒಪ್ಪಿಕೊಂಡಿತು. ಪರಿಣಾಮವೇ ಇಂದು ನಮ್ಮ ಲೀಸ್‌ ಹೊಲದಲ್ಲಿ ರಾಗಿಯ 77 ತಳಿಯ ತಾಕುಗಳು ನಿರ್ಮಾಣವಾಗಿ ಸಾವಯವ ಪದ್ಧತಿಯಲ್ಲಿ ಪ್ರತಿವರ್ಷ 2 ಕ್ವಿಂಟಲ್‌ನಷ್ಟು ರಾಗಿಯ ಬೀಜಗಳನ್ನು ಬೆಳೆದು ಕೊಡಲಾಗಿದೆ’.

’10 ರೂಪಾಯಿ ಕೂಲಿಗೆ ಹೋಗುತ್ತಿದ್ದ 13 ಮಂದಿ ಮಹಿಳೆಯರು 2000ರಲ್ಲಿ ಸಂಘ ಕಟ್ಟಿಕೊಂಡು ವಾರಕ್ಕೆ 10 ರೂಪಾಯಿ, ನಂತರ ತಿಂಗಳಿಗೆ 50 ರೂಪಾಯಿ, ಹಾಗೇ ಮುಂದೆ 100, 200 ರೂಪಾಯಿ ವಿನಿಯೋಗಿಸಿ ಸ್ವಸಹಾಯ ಸಂಘವನ್ನು ನಡೆಸಿದೆವು. ಕೆಲವರು ಸಾಲ ಪಡೆದು ಮನೆಯಲ್ಲೇ ಗೃಹೋದ್ಯಮ, ಟೇಲರಿಂಗ್‌ ಆರಂಭಿಸಿದರು. ಮುಂದೆ ಜಮೀನನ್ನೇ ಗೇಣಿಗೆ ಪಡೆದು ಶೇಂಗಾ, ಸಿರಿಧಾನ್ಯ ಬೆಳೆಯಲು ಆರಂಭಿಸಿದೆವು. 2021ರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ₹1 ಲಕ್ಷ ಪ್ರೋತ್ಸಾಹ ಹಣ ದೊರೆತಾಗ ₹50 ಸಾವಿರ ನೀಡಿ ಅರ್ಧ ಎಕರೆ ಜಮೀನನ್ನು 2 ವರ್ಷಕ್ಕೆ ಲೀಸ್‌ಗೆ ಪಡೆದು ರಾಗಿಯ 77 ತಳಿಯನ್ನು ಬೆಳೆಯಲು ಆರಂಭಿಸಿದೆವು. ಹೇಗೆ ಬೆಳೆಯಬೇಕು ಎಂಬುದನ್ನು ಸಹಜ ಸಮೃದ್ಧದವರೇ  ಮಾರ್ಗದರ್ಶನ ನೀಡಿದರು. ಈ ರಾಗಿಗಳನ್ನು ಬೀಜಕ್ಕಾಗಿ ಬೆಳೆದು ನೀಡಬೇಕಿರುವುದರಿಂದ ವಿಶೇಷ ಮುತುವರ್ಜಿ ಬೇಕು. ತಳಿಗಳು ಮಿಶ್ರವಾಗುವಂತಿಲ್ಲ. ಅದಕ್ಕಾಗಿ ಒಂದು ರಾಗಿ ತಳಿಯ ತಾಕಿನಿಂದ ಇನ್ನೊಂದು ತಾಕಿಗೆ ಹೆಚ್ಚಿನ ಜಾಗ ಬಿಡುವುದು ಅನಿವಾರ್ಯ. ಆಗ ನಾವು ಆಗ ಜಾಗವನ್ನು ವ್ಯರ್ಥಮಾಡದೆ ಎಳ್ಳನ್ನು ಬೆಳೆದೆವು. ಮಳೆಯ ಕೊರತೆಯಿಂದ ಬೆಳೆಯಲ್ಲಿ ಕೊಂಚ ಹಿನ್ನೆಡೆ ಅನಿಸಿದರೂ ನಷ್ಟವೇನು ಆಗಲಿಲ್ಲ’. ಸ್ವಂತ ಜಮೀನಿಲ್ಲದಿದ್ದರೂ ‘ಸಾಮೂಹಿಕ ಕೃಷಿ’ ಮೂಲಕ ಗೇಣಿ, ಲೀಸ್‌ ಹೊಲದಲ್ಲಿ ಸ್ವಾವಲಂಬನೆ ಕಂಡುಕೊಂಡಿದ್ದಾರೆ.  ವಿನಾಯಕ ಸ್ತ್ರೀ ಶಕ್ತಿ ಸಂಘದ ಮಹಿಳೆಯರು. ಕೂಲಿಯಾಳಾಗಿ ದುಡಿದವರ ಸಾಮೂಹಿಕ ಕೃಷಿಯ ಯಶೋಗಾಥೆ ಗುರುತಿಸಿ ಸಾಕಷ್ಟು ಪ್ರಶಸ್ತಿ, ಪುರಸ್ಕಾರಗಳೂ ವಿನಾಯಕ ಸ್ತ್ರೀ ಶಕ್ತಿ ಸಂಘಕ್ಕೆ ಲಭಿಸಿವೆ.

ವಿನಾಯಕ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಹೊಲವನ್ನು ಹದಗೊಳಿಸುತ್ತಿರುವುದು
ವಿನಾಯಕ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಹೊಲವನ್ನು ಹದಗೊಳಿಸುತ್ತಿರುವುದು
ರತ್ನಾ ಪ್ರಕಾಶ ಹೊಸಳ್ಳಿ 
ರತ್ನಾ ಪ್ರಕಾಶ ಹೊಸಳ್ಳಿ 
ರಾಗಿಯ 77 ತಳಿಯಲ್ಲಿ ಒಂದೊಂದು ತಳಿಯ 50–100 ಗ್ರಾಮ್‌ನಿಂದ ಒಟ್ಟಾರೆ 2 ಕ್ವಿಂಟಲ್‌ನಷ್ಟು ರಾಗಿಯ ಬೀಜವನ್ನು ಬೆಳೆದು ಕೊಡಲಾಗಿದೆ. ಇದರಿಂದ ನಮ್ಮ ನೆಲದ ಸಿರಿಧಾನ್ಯ ತಳಿಯ ಸಂರಕ್ಷಿಸಿದ ಸಂತೃಪ್ತಿಯೂ ನಮಗಿದೆ
ರತ್ನಾ ಹೊಸಳ್ಳಿ ವಿನಾಯಕ ಸ್ತ್ರೀ ಶಕ್ತಿ ಸಂಘದ ಸಂಚಾಲಕಿ
ಜಿ.ಕೃಷ್ಣಪ್ರಸಾದ
ಜಿ.ಕೃಷ್ಣಪ್ರಸಾದ
ಕರ್ನಾಟಕ ರಾಜ್ಯ ಸರ್ಕಾರ ಸಮುದಾಯ ಬೀಜ ಬ್ಯಾಂಕ್‌ ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ. 77 ರಾಗಿ ತಳಿಗಳನ್ನು ಸಂರಕ್ಷಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ವಿನಾಯಕ ಸ್ತ್ರೀ ಶಕ್ತಿ ಸಂಘದಂತ ಸ್ತ್ರೀ ಸ್ವಸಹಾಯ ಗುಂಪುಗಳಿಗೆ ಸವಲತ್ತು ಸಿಗಬೇಕು
ಜಿ.ಕೃಷ್ಣಪ್ರಸಾದ ಸಹಜ ಸಮೃದ್ಧ ನಿರ್ದೇಶಕ
ಬಿತ್ತಿ ಬೆಳೆದ ರಾಗಿ ತಳಿಗಳು...
ಮಳಲಿ ರಾಗಿ, 22 ತೆನೆ ರಾಗಿ, 23 ತೆನೆ ರಾಗಿ, ಪಿಚ್‌ಕಟ್ಟಿ ರಾಗಿ, ಕೆಂಪು ತೆನೆ ರಾಗಿ, ಬೆಟ್ಟದ ಕೆಳಗಿನ ರಾಗಿ, ಗುತ್ತಿ ರಾಗಿ, ಮೂರು ತಿಂಗಳ ರಾಗಿ, ಉಂಡೆ ರಾಗಿ, ಜಗಳೂರು ರಾಗಿ, ಹಸಿರು ಕಡ್ಡಿ ರಾಗಿ, ನಾಕು ರಾಗಿ, ಜೇನು ಮುಂಡಗ ರಾಗಿ, ಹಸಿರು ಕಂಬಿ ರಾಗಿ, ಮಧ್ಯಮ ರಾಗಿ, ಅಯ್ಯನ ರಾಗಿ, ಉಗಾಂಡಾ ರಾಗಿ, 140 ದಿನದ ರಾಗಿ, ಕೋಳಿ ಮೊಟ್ಟೆ ರಾಗಿ, ತೆನೆಮುದ್ದೆ ರಾಗಿ, ಬೊಂಡಾ ರಾಗಿ, ದೊಡ್ಡ ರಾಗಿ, ಹಾಲುಕುಳಿ ರಾಗಿ, ರಾಗಳ್ಳಿ–ಶಿವಳ್ಳಿ ರಾಗಿ, ಕಲ್ಲು ರಾಗಿ, ತೈದಳು ರಾಗಿ, ನೇಪಾಲ ರಾಗಿ, ಕರಿಕಡ್ಡಿ ರಾಗಿ, ನಾಶಿನಿ ರಾಗಿ, ಮಜ್ಜಿಗೆ ರಾಗಿ, ಯಾಡಾ ರಾಗಿ, ವಿಶಾಕಪಟ್ಟಣ ರಾಗಿ, ಗೆಜ್ಜೆ ರಾಗಿ, ಜೇನುಗೂಡು ರಾಗಿ, ಉದುರು ಮಲ್ಲಿಗೆ ರಾಗಿ, ಜಡೆ ರಾಗಿ, ಜೇನ ಗೌಡ್ರ ರಾಗಿ, ಬೆಣ್ಣೆ ಮುದ್ದೆ ರಾಗಿ ಸಮೇತ 77 ತಳಿಯ ರಾಗಿಯನ್ನು ವಿನಾಯಕ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಸಾಮೂಹಿಕ ಕೃಷಿಯಲ್ಲಿ ಬೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT