ಚಿಕ್ಕಬಳ್ಳಾಪುರ: ಶ್ರದ್ಧಾಭಕ್ತಿಯ ನಡುವೆ ಗುರು ಪೂರ್ಣಿಮೆ

ಚಿಕ್ಕಬಳ್ಳಾಪುರ: ಆಷಾಢ ಮಾಸದ ಹುಣ್ಣಿಮೆಯ ದಿನವಾದ ಮಂಗಳವಾರ ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿ, ಸಂಭ್ರಮದಿಂದ ಗುರು ಪೂರ್ಣಿಮೆಯನ್ನು ಆಚರಿಸಲಾಯಿತು.
ಶಿರಡಿ ಸಾಯಿ ಬಾಬಾ ಮಂದಿರಗಳಲ್ಲಿ ದಿನವೀಡಿ ವಿಶೇಷ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಭಕ್ತರು ಬೆಳಿಗ್ಗೆಯಿಂದಲೇ ಬಾಬಾ ದರ್ಶನ ಪಡೆಯಲು ದೇವಸ್ಥಾನಗಳತ್ತ ತೆರಳುತ್ತಿದ್ದ ದೃಶ್ಯ ಕಂಡುಬಂತು.
ನಗರದ ಎಂ.ಜಿ.ರಸ್ತೆಯ ಮುನ್ಸಿಪಲ್ ಬಡಾವಣೆಯಲ್ಲಿರುವ ಸಿದ್ಧಿವಿನಾಯಕ, ಶಿರಡಿ ಸಾಯಿಬಾಬಾ ಹಾಗೂ ಅನ್ನಪೂರ್ಣೇಶ್ವರಿ ದೇವಾಲಯ ಮತ್ತು ಎಚ್.ಎಸ್.ಗಾರ್ಡನ್ನಲ್ಲಿರುವ ಸುಬ್ರಹ್ಮಣ್ಯೇಶ್ವರ, ಶನೈಶ್ವರ, ಶಿರಡಿ ಸಾಯಿಬಾಬಾ ಮಂದಿರದಲ್ಲಿ ಅದ್ದೂರಿಯಾಗಿ ಗುರು ಪೂರ್ಣಿಮೆ ಆಚರಿಸಲಾಯಿತು.
ಎರಡು ದೇವಸ್ಥಾನಗಳಲ್ಲಿ ಸಾಯಿ ಬಾಬಾ ಅವರ ಮೂರ್ತಿಗಳಿಗೆ ವಿವಿಧ ಅಭಿಷೇಕ ನೆರವೇರಿಸಲಾಯಿತು. ಹೂವಿನ ಅಲಂಕಾರ ಮಾಡಲಾಗಿತ್ತು. ಭಕ್ತರು ವಿವಿಧ ಸೇವೆಗಳನ್ನು ಸಲ್ಲಿಸುತ್ತಿದ್ದದ್ದು ಗೋಚರಿಸಿತು. ತೀರ್ಥ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು.
ಮುನ್ಸಿಪಲ್ ಬಡಾವಣೆಯ ದೇವಾಲಯದಿಂದ 6ನೇ ವರ್ಷದ ಗುರುಪೂರ್ಣಿಮಾ ಅಂಗವಾಗಿ ಬೆಳಿಗ್ಗೆ ಕಾಕಡಾರತಿ, ಭಕ್ತಾದಿಗಳಿಂದ ಕ್ಷೀರಾಭಿಷೇಕ, ಸತ್ಯನಾರಾಯಣಪೂಜೆ, ಹೋಮ, ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಮಧ್ಯಾಹ್ನದ ಬಳಿಕ ಬಾಬಾ ಅವರ ಪಲ್ಲಕ್ಕಿ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಾದಸ್ವರ, ತಮಟೆ ವಾದನ, ನಾಸಿಕ್ ಡೋಲು ತಂಡಗಳು ಮೆರವಣಿಗೆಗೆ ರಂಗು ತುಂಬಿದವು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.