ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕಲಾ ಪ್ರದರ್ಶನ: ಸ್ಥಿತಿಸ್ಥಾಪಕತ್ವದ ದೃಶ್ಯ ಮೇಳದಲ್ಲೊಂದು ವಿಸ್ಮಯಲೋಕ

Last Updated 8 ಜೂನ್ 2022, 14:10 IST
ಅಕ್ಷರ ಗಾತ್ರ

ಕಲಾವಿಮರ್ಶಕ ಹಾಗೂ ಕಲಾವಿದ ಚಿ.ಸು.ಕೃಷ್ಣಸೆಟ್ಟಿ ಅವರ 'ಕೃಷ್ಣಸೆಟ್ಟಿ ಫೌಂಡೇಷನ್' ಆಯೋಜಿಸಿದ 'ರಿಸೀಲಿಯನ್ಸ್' (ಸ್ಥಿತಿಸ್ಥಾಪಕತ್ವ) ಶೀರ್ಷಿಕೆಯಡಿಯಲ್ಲಿ ಐವತ್ತೇಳು ಕಲಾವಿದರ ಚಿತ್ರಕಲಾ ಪ್ರದರ್ಶನ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಏಳು ಗ್ಯಾಲರಿಗಳಲ್ಲಿ ಜೂನ್ 4 ರಿಂದ 12ರವರೆಗೆ ನಡೆಯುತ್ತಲಿದೆ.

ಕರ್ನಾಟಕದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಹಿರಿ ಕಿರಿ ಕಲಾವಿದರ ಕೃತಿಗಳು ಇಲ್ಲಿವೆ. ಕೋವಿಡ್ ನಂತರ ಬಹುದೊಡ್ಡ ಪ್ರಮಾಣದ ಕಲಾಪ್ರದರ್ಶನವಿದು. ಕಲಾಸಕ್ತನಿಗೆ ಕಲೆಯ ರಸಾನುಭವ ಪಡೆಯಲು ಅಭಿವ್ಯಕ್ತಿಯ ಬಹುರೂಪಗಳನ್ನು ಇಲ್ಲಿ ತೂಗು ಹಾಕಲಾಗಿದೆ. ಕಲೆಯನ್ನು ಆಸ್ವಾದಿಸುವವನ ಸುಪ್ತ ಭಾವಕೋಶವನ್ನು ಬಡಿದೆಬ್ಬಿಸಿ ಮಂತ್ರಮುಗ್ಧರಾಗಿಸುವ ಕೃತಿಗಳು ತೂಗಲ್ಪಟ್ಟಿವೆ. ಈ ಪ್ರದರ್ಶನಕ್ಕೆಂದೇ ರಚಿಸಿದ ಐವತ್ತೇಳು ಹೊಸಕೃತಿಗಳು ಒಂದು ವಿಸ್ಮಯ ಲೋಕವನ್ನೇ ನೋಡುಗನೆದುರು ತೆರೆದಿಟ್ಟಿವೆ.

ಸಂಕೀರ್ಣ ಬದುಕಿನ ಜೀವ ಪ್ರಪಂಚದ ಬಗೆಬಗೆಯ ಹೊರಳು ನೋಟಗಳ ರೂಪಗಳು ಬಸವರಾಜಾಚಾರ್ ಕೆ.ರ್. ಅವರ ಉಡ್ ಕಟ್‌ನ ‘ಜರ್ನಿ-3 ಕೃತಿಯಲ್ಲಿವೆ. ಮನುಷ್ಯ ಸಂಬಂಧ ಬಹು ಸಂಕೀರ್ಣ. ಬಸವರಾಜಾಚಾರ್ ಅದನ್ನು ಜಾನಪದೀಯ ಕಲಾ ಸಂಕೇತಗಳ ರೂಪಕತೆಗಳ ಮೂಲಕ ಹೇಳುವ ಯತ್ನವನ್ನು ಕೃತಿಯಲ್ಲಿ ಮಾಡಿರುವರು. ಅತ್ರಿ ಚೇತನ್ ಅವರ ಉಡ್ ಕಟ್‌ನ ‘ಲೇಯಿಂಗ್ ಟುಗೆದರ್-2’ ಕತ್ತಲು ಹಿನ್ನೆಲೆಯ ಬೆಳಕಲ್ಲಿ ಕಾಣುವ ಸೈಕಲ್ ಗಾಲಿಗಳು. ಅದರ ಹಿಂಬದಿ ರೂಪವು ಚೆಲುವು ಪಡೆದಿದೆ. ಒಂದು ಕಾಲದಲ್ಲಿ ಸೈಕಲ್‌ಗಳು ಬದುಕಿನ ಭಾಗವಾಗಿದ್ದವು. ನಾಸ್ಟಾಲ್ಜಿಕ್ ಸ್ಮೃತಿಯ ಛಾಯೆಯಲ್ಲಿರುವ ಒಂದಕ್ಕೊಂದು ಒರಗಿದ ಸೈಕಲ್‌ನ ಚಕ್ರಗಳು ಸ್ಥಾವರಗೊಂಡಿದ್ದರೂ ಒಂದು ಚಲನಶೀಲ ಬದುಕನ್ನು ಅವು ಕಟ್ಟಿಕೊಡುತ್ತವೆ.

ಎಸ್.ಎ.ವಿಮಲನಾಥನ್ ಅವರ ಅಕ್ರಿಲಿಕ್‌ನಲ್ಲಿ ರಚಿಸಿದ ಕೃತಿ 'ಸಿಟಿ' ಗಮನ ಸೆಳೆಯುತ್ತದೆ. ಶಹರು ಬದುಕಿನ ಸಂಕೀರ್ಣತೆಗಳು ಮೇಲ್ನೋಟದಲ್ಲಿ ಸೆಳೆದರೂ ಅದರಾಳದಲ್ಲಿ ಹುದುಗಿದ ಅಂತರಾಳವು ಗಾಢವರ್ಣಗಳಲ್ಲಿಯ ಥಳುಕು ಬಳುಕನ್ನು ಹೇಳುತ್ತದೆ. ಇವೆಲ್ಲ ನೆನಪಿಗೆ ಇಳಿಯುತ್ತವೆ. ವಿವಿಧ ಚಿತ್ರಭಿತ್ತಿಗಳು ನೋಡುಗನ ಅನುಸಂಧಾನದಲ್ಲಿ ತೊಡಗಿ ಬಹು ಆಯಾಮಗಳಲ್ಲಿ ಕಾಡುತ್ತದೆ.

ಅಕ್ರಿಲಿಕ್‌ನಲ್ಲಿ ರಚಿಸಿದ ಕರಿಯಪ್ಪ ಹಂಚಿನಮನಿಯವರ 'ಶೀರ್ಷಿಕೆರಹಿತ' ಬೃಹತ್ ಕೃತಿ-ಅದರ ಬಣ್ಣಗಳ ಹೊಯ್ದಾಟದಲ್ಲಿ ವ್ಯಕ್ತಗೊಳ್ಳುವ ಚಿತ್ರ ವಿನ್ಯಾಸಗಳ ರೂಪಗಳು, ಮೈವಳಿಕೆಯಲ್ಲಿ ತೋರುವ ತೆಳು ಮತ್ತು ದಟ್ಟಬಣ್ಣಗಳ ತೀವ್ರ ಕುಂಚದ ಬಳಕೆ ಕಲಾಕೃತಿಯನ್ನು ಒಂದು ಶ್ರೇಷ್ಠತ್ವದ ಹಂತಕ್ಕೆ ಕೊಂಡೊಯ್ಯುತ್ತದೆ. ಗೆರೆಗಳಲ್ಲಿ ಮೂಡಿದ ನಗ್ನ ಅಮೂರ್ತ ಚಿತ್ರಗಳು ಕಾಮದ ಹಸಿವು ನೀಗಿದ ಬಳಿಕದ ದಣಿವನ್ನು ಹೇಳುವುದಷ್ಟೇ ಅಲ್ಲ, ಒರಗುವಿಕೆಯಲ್ಲಿ ತನುಮನಗಳ ಆಹ್ಲಾದದಾಯಿ ಅನುಭೂತಿಯನ್ನು ದಕ್ಕಿಸುವಂತೆ ಮಾಡುತ್ತವೆ.

ಎಮ್.ನಾರಾಯಣ್ ಅವರ 'ಪೋಲೊ' ಬೃಹತ್ ಕಲಾಕೃತಿ. ಮುಖ್ಯವಾಗಿ ಕ್ಯಾನ್‌ವಾಸ್ ಮೇಲೆ ಕಲಾವಿದನ ಕುಂಚದ ಗತಿಯ ಜೋರು ಹೊಡೆತಗಳು ಅಭಿವ್ಯಕ್ತಿಯ ಮೌಲ್ಯವನ್ನು ವೃದ್ಧಿಸಿವೆ. ಹತ್ತಿರದಲ್ಲಿ ನೋಡಿದಾಗಿನ ಒಂದು ಫಾರ್ಮನ ತಂತ್ರ ದೂರದಿಂದ ಕಾಣುವ ನೋಟದಲ್ಲಿ ಕುದುರೆಗಳ ಓಟದ ಅಶ್ವಶಕ್ತಿ, ಠೇಂಕಾರಗಳ ನೆಗೆತ-ಅಬ್ಬಾ ಎಂಬ ಉದ್ಗಾರ ಹೊರಡುತ್ತದೆ.

ಗಣೇಶ ಧಾರೇಶ್ವರ ಅವರ ವಿಭಿನ್ನ ಕೃತಿ 'ಜೆನರೇಷನ್ಸ್, ಟೈಮ್ ಅಂಡ್ ಪರಸೆಪ್ಷನ್ಸ್' ಶೀರ್ಷಿಕೆಯಲ್ಲಿದೆ. ಇದು ರಚನಾಶೈಲಿಯಿಂದ ತೀವ್ರಗಮನ ಸೆಳೆಯುತ್ತದೆ. ಅಕ್ರಿಲಿಕ್ ಬಣ್ಣ ಪ್ರಧಾನವಾಗಿ ಫ್ಯಾಬ್ರಿಕ್ ವಿವಿಧ ವಸ್ತುಗಳನ್ನು ಮೈವಳಿಕೆಯ ಮೇಲೆ ಬಳಸಿದ್ದಾರೆ. ಜೀನ್ಸ್‌ ಪ್ಯಾಂಟ್, ಜಾಕೆಟ್, ಅಂಗಿಯ ಬಿಳಿತೋಳು, ಪ್ಯಾಂಟಿನ ಜೇಬು, ಅದರಲ್ಲಿ ಮೊಬೈಲು-ಹೀಗೆ ಕಲಾವಿದ ಇಂದಿನ ಪೀಳಿಗೆಯ ಒಳನೋಟಗಳನ್ನು ಅಭಿವ್ಯಕ್ತಿಸುತ್ತಾನೆ.

ಅಕ್ರಿಲಿಕ್‌ನಲ್ಲಿ ಒಡಮೂಡಿದ ಹುಮೇರಾ ಅಲಿಯವರ 'ಹಾರ್ಮನಿ' ತೆಳುವಾದ ಬಣ್ಣಗಳ ಸಾಂಗತ್ಯ, ನಿಸರ್ಗದಲ್ಲಿ ಒಡಮೂಡುವ ಲಾಲಿತ್ಯದ ರೂಪಗಳು ಏಕತೆಯ ಧ್ವನಿಗಳಾಗಿವೆ. ಇದೇ ಸ್ವರೂಪದ ಶಿವಕುಮಾರ ಕೆಸರಮಡು ಅವರ 'ಶೀರ್ಷಿಕೆರಹಿತ' ಕೃತಿ ಕಡಿಮೆ ಬಣ್ಣಗಳಲ್ಲಿ ತೆಳು ಮತ್ತು ದಟ್ಟೈಸುವಿಕೆಯ ರಚನಾತಂತ್ರದಿಂದ ಅಲೌಕಿಕ ರೂಪವನ್ನು ಸೃಷ್ಟಿಸಿದೆ.

ಸುರೇಶ ಕೆಂಪೇಗೌಡ ಅವರ 'ಶೀರ್ಷಿಕೆರಹಿತ' ಕೃತಿ ದಿನಾಂಕ ಸಂಖ್ಯೆ ಮತ್ತು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಸಂದೇಶ ನೀಡುವ ಸಾಲುಗಳನ್ನು ಬಳಸಿರುವ ಇದರಲ್ಲಿ ಅಮೂರ್ತ ವ್ಯಕ್ತಿ ಮತ್ತು ವರ್ಸಸ್ ಸಂಕೇತ ಇಟ್ಟು ಮನುಷ್ಯ ಕ್ರೌರ್ಯದ ವ್ಯಾಖ್ಯಾನವನ್ನು ಅಭಿವ್ಯಕ್ತಿಸುತ್ತದೆ. ವಿನೋದಕುಮಾರ ಅವರ 'ಎಕ್ಸಪ್ಲೋರ್-2' ಅಕ್ರಿಲಿಕ್ ಮಾಧ್ಯಮದ ರಚನೆ. ಸೂಕ್ಷ್ಮ ಜೀವರೂಪಗಳಲ್ಲಿ ಸೃಷ್ಟಿಯ ಸ್ಥಿತಿಸ್ಥಾಪಕತ್ವವನ್ನು ಸಾರುತ್ತ ಸೃಷ್ಟಿ, ಲಯ, ಮೋಕ್ಷದೆಡೆಗಿನ ಅನುಭೂತಿಯ ಭಾವವು ಉಂಟಾಗುತ್ತದೆ. ವಿಜಯ ನಾಗವೇಕರ ಅವರ 'ಲಿಲಿ' ಕೃತಿ ನೀರಲ್ಲಿ ತೇಲುವ ಕಮಲದ ಹೂವಿನ ಚಿತ್ತಾರವು ಒಂದು ಪ್ರಭಾವಳಿ ಹೊಂದಿದ್ದು, ಇದ್ದೂ ಇಲ್ಲದ ಭಾವನೆಯನ್ನು ಹೊರಹೊಮ್ಮಿಸುತ್ತದೆ. ಶಿಲ್ಪಿಗಳಾದ ತೇಜೇಂದ್ರ ಬಾವೋನಿ ಮತ್ತು ವೆಂಕಟಾ ಚಲಪತಿ ಅವರ ಶಿಲ್ಪಕೃತಿಗಳಿವೆ.

ಜೆ.ಎಮ್.ಎಸ್.ಮಣಿ, ಗುರುದಾಸ ಶೆಣೈ, ಡಿಂಪಲ್ ಶಹಾ, ಪರಮೇಶ ಜೋಳದ, ಸುಬ್ರಮಣಿ ಗೋಪಾಲಸಾಮಿ, ಮಂಜುನಾಥ ಕಲ್ಲೇದೇವರು, ಲಕ್ಷ್ಮಿ ಮೈಸೂರು, ಜಯಂತ ಹುಬ್ಳಿ, ಬಿ.ಎಸ್.ದೇಸಾಯಿ, ಕಂದನ್.ಜಿ ಮುಂತಾದವರು ಸೇರಿದಂತೆ ಐವತ್ತೇಳು ಕಲಾವಿದರ ಅತ್ಯುತ್ತಮ ಕಲಾಕೃತಿಗಳು ಈ 'ರಿಸೀಲಿಯನ್ಸ್' ಕಲಾಪ್ರದರ್ಶನದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT