ಕವನಗಳೇ ಹಾಗೆ. ಕೋಲ್ಮಿಂಚಿನಂತೆ ಥಟ್ಟನೆ ಬಡಿದು ಯೋಚನೆಗಳ ಕಿಡಿ ಹೊತ್ತಿಸುವ ಅನುಭಾವ ಆವುಗಳದು. ಈ ಕಿಡಿಗೆ ಗಾಳಿ ಸಿಕ್ಕರೆ ಸಾಲಿಗೆ ಸಾಲು ಬೆಳೆದು ಪದ್ಯಗಳ ಸುರಿಮಳೆ. ಇದೇ ರೀತಿಯ ಪದ್ಯಗಳ ಗುಚ್ಛ ‘ಮಿಂಚು’.ಮಿಂಚುಗಳಂತೆ ಹೊಳೆದ ಈ ಬರಹಗಳು ಪತ್ರಕರ್ತ ಕಂ.ಕ.ಮೂರ್ತಿ ಅವರ ‘ಧ್ಯಾನಸ್ಥ ಗಳಿಗೆಯ ಅನುಭಾವ’.
ಈ ಕವನ ಗುಚ್ಛವನ್ನು ಲೇಖಕರು ಹೀಗೆನ್ನುತ್ತಾರೆ–‘ಒಂದು ವಿಚಾರವನ್ನು ಮಥಿಸಿದಾಗ ಮನಸ್ಸಿನಲ್ಲಿ ಹೊಳೆದ ಕೋಲ್ಮಿಂಚುಗಳು’. ‘ಇವುಗಳನ್ನು ಪದ್ಯಗಳಾದರೂ ಎನ್ನಿ ಅಥವಾ ಈ ಪ್ರಕಾರಕ್ಕೆ ಒಗ್ಗದವು ಎಂದರೂ ಚಿಂತೆ ಇಲ್ಲ’ ಎಂದು ಹೇಳುತ್ತಾ ಅಲ್ಲಲ್ಲಿ ತಾವು ಬರೆದ ಪದ್ಯಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಕೊಟ್ಟು, ತಮಗೆ ಹೊಳೆದ ವಿಚಾರಗಳನ್ನೂ ಎದುರಿಗಿರಿಸಿದ್ದಾರೆ.
ಅರೆಬೆಂದ ಅಕ್ಕಿ ಅನ್ನವಾಗುವುದಿಲ್ಲ
ಅರೆ ತಿಳಿವಳಿಕೆ ಜ್ಞಾನವಾಗುವುದಿಲ್ಲ
–ಹೀಗೆ ಎರಡು ಸಾಲಿನಲ್ಲೇ ವಿಚಾರಗಳನ್ನು ಬಡಿದೆಬ್ಬಿಸುವ ಕೋಲ್ಮಿಂಚುಗಳಿಲ್ಲಿ ಹಲವು. ಅಮ್ಮನ ಪ್ರೀತಿ, ಮೌನದ ಅರ್ಥ, ಮುಸ್ಸಂಜೆಯ ತಿಳಿಗಾಳಿ, ಪ್ರೀತಿ, ಬದುಕು, ಪ್ರಕೃತಿಯ ವಿಸ್ಮಯ... ಹೀಗೆ ಇಲ್ಲಿ ಸರಳ ವಿಷಯಗಳೇ ಹಲವು ಪದ್ಯಗಳಿಗೆ ವಸ್ತುವಾಗಿವೆ.