ಬಳ್ಳಾರಿ: ಸೇವಾ ಭದ್ರತೆ ಒದಗಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಅವರನ್ನು ಒತ್ತಾಯಿಸಿದೆ.
ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಈ ಕುರಿತ ಮನವಿ ಸಲ್ಲಿಸಿದ ಒಕ್ಕೂಟದ ಸದಸ್ಯರು, ಕೆಲವು ವರ್ಷಗಳಿಂದ ವಿವಿಧ ಪದವಿ ಕಾಲೇಜುಗಳಲ್ಲಿ ರಾಜ್ಯ ಸರಕಾರವು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಸೇವೆಯನ್ನು ಕಾಯಂಗೊಳಿಸದ್ದರಿಂದ ತೊಂದರೆಯಾಗಿದೆ.
ವರ್ಷಕ್ಕೊಮ್ಮೆ ವೇತನ ಅಥವಾ ಗೌರವಧನ ನೀಡಲಾಗುತ್ತಿದೆ. ಕಾಯಂ ಉಪನ್ಯಾಸಕರಿಗೆ ಮಾತ್ರ ತಿಂಗಳ ಆರಂಭದಲ್ಲೇ ವೇತನ ನೀಡುವ ಸರಕಾರ, ಅತಿಥಿ ಉಪನ್ಯಾಸಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದೆ. ಅತಿಥಿ ಉಪನ್ಯಾಸಕರನ್ನು ಕಡೆಗಣಿಸುತ್ತ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ದುರುಗಪ್ಪ, ಡಾ. ಶ್ಯಾಂಮೂರ್ತಿ, ಡಾ.ಕೆ. ಬಸಪ್ಪ, ರಮೇಶ್. ಎಸ್.ಎಂ, ರಫಿ, ಶಿವಕುಮಾರ್ ಅಂಗಡಿ, ಡಿ.ಸಿದ್ಧೇಶ, ಡಿ.ರಾಧ, ಸುಧೀರಕುಮಾರ್, ಶ್ರೀವಾಣಿ, ಭಾರತ ವಿದ್ಯಾರ್ಥಿ ಫೆಡರೇಷನ್ ರಾಜ್ಯ ಘಟಕದ ಉಪಾಧ್ಯಕ್ಷ ಹುಳ್ಳಿ ಉಮೇಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.