<p>ಕುಟುಂಬ ರಾಜಕಾರಣ ಮತ್ತು ಮತೀಯ ರಾಜಕಾರಣ ಎರಡು ಅತಿರೇಕಗಳು. ಬಹುಶಃ ಇವೆರಡೂ ಶಾಪಗಳು ಭಾರತದ ಪ್ರಜಾಪ್ರಭುತ್ವಕ್ಕೆ ಅಂಟಿರದಿದ್ದರೆ ನಮ್ಮ ವ್ಯವಸ್ಥೆಯಷ್ಟು ಸೊಗಸಾದುದು ಮತ್ತೊಂದು ಇರುತ್ತಿರಲಿಲ್ಲವೇನೊ! ಸುಮಾರು ಐದು ದಶಕಗಳ ಇತಿಹಾಸವಿರುವ ಕುಟುಂಬ ರಾಜಕಾರಣ ಮತ್ತು ಸ್ವಾತಂತ್ರ್ಯಪೂರ್ವದಿಂದಲೂ ‘ಗುಮ್ಮ’ನಂತೆ ಹಿಂಬಾಲಿಸುತ್ತಿರುವ ಮತೀಯ ರಾಜಕಾರಣ ಇವೆರಡರಲ್ಲಿ ಯಾವುದು ಹೆಚ್ಚು ಅಥವಾ ಯಾವುದು ಕಡಿಮೆ ಹಾನಿಕರ ಎಂದು ತೀರ್ಮಾನಿಸುವುದು ಕಷ್ಟ.<br /> <br /> ಮತೀಯ ರಾಜಕಾರಣ ಮತ್ತು ಕುಟುಂಬ ರಾಜಕಾರಣ ನಡುವಿನ ಜಿದ್ದಾಜಿದ್ದಿಗೆ ಏಪ್ರಿಲ್–ಮೇ ಲೋಕಸಭೆ ಚುನಾವಣೆ ಸಾಕ್ಷಿಯಾಗಲಿದೆ. ಭ್ರಷ್ಟಾಚಾರ ಹಗರಣಗಳು, ಬೆಲೆ ಏರಿಕೆ ಮತ್ತಿತರ ಸಮಸ್ಯೆಗಳು ಊಟಕ್ಕಿರುವ ಉಪ್ಪಿನಕಾಯಿಯಂತೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಈಗಾಗಲೇ ಪರಸ್ಪರ ಕೆಸರು ಎರಚಾಟದಲ್ಲಿ ತೊಡಗಿದ್ದಾರೆ. ನೆಹರೂ– ಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಚುನಾವಣಾ ಸಮರದಲ್ಲಿ ಮುಖಾಮುಖಿ ಆಗಿದ್ದಾರೆ.<br /> <br /> ಹಿರಿಯ ಪೀಳಿಗೆ ಜನ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಂದ ಹಿಡಿದು ರಾಹುಲ್ ಗಾಂಧಿವರೆಗೆ ನೆಹರೂ–ಗಾಂಧಿ ಮನೆತನದ ನಾಲ್ಕು ತಲೆಮಾರುಗಳನ್ನು ಕಂಡಿದ್ದಾರೆ. ಅವರ ರಾಜಕೀಯ ವರಸೆಗಳು– ತಂತ್ರಗಳನ್ನು ಗಮನಿಸಿದ್ದಾರೆ. ರಾಹುಲ್ ತಮ್ಮ ತಂದೆ, ಅಜ್ಜಿ ಹಾಗೂ ಮುತ್ತಜ್ಜನಂತೆ ಪ್ರಧಾನಿ ಹುದ್ದೆಗೆ ಏರುವರೇ ಎಂದು ಭವಿಷ್ಯ ಹೇಳುವುದು ಕಷ್ಟ. ಕಾಲವೇ ಇದಕ್ಕೆಲ್ಲ ಉತ್ತರಿಸಬೇಕು. ಆದರೆ, ಜನ ನೆಹರೂ– ಗಾಂಧಿ ಕುಟುಂಬದ ಮೇಲೆ ಪ್ರೀತಿ ತೋರುತ್ತಾ ಬಂದಿದ್ದಾರೆ. ಅವರ ರಾಜಕಾರಣಕ್ಕೆ ಒಪ್ಪಿಗೆಯ ಮುದ್ರೆ ಒತ್ತುತ್ತಾ ಬಂದಿದ್ದಾರೆ. ಯಾವುದೋ ಒಂದು ಚುನಾವಣೆಯಲ್ಲಿ ಕೈಬಿಟ್ಟರೆ ಮತ್ತೊಂದು ಚುನಾವಣೆಯಲ್ಲಿ ಕೈ ಹಿಡಿದಿದ್ದಾರೆ.<br /> <br /> ಆಧುನಿಕ ಭಾರತದ ರೂವಾರಿ ನೆಹರೂ 1964ರ ಮೇನಲ್ಲಿ ನಿಧನರಾದಾಗ ಉತ್ತರಾಧಿಕಾರಿ ಯಾರಾಗಬೇಕು ಎಂಬ ಪ್ರಶ್ನೆ ಕಾಂಗ್ರೆಸ್ಸಿನ ಹಿರಿಯ ನಾಯಕರಿಗೆ ಎದುರಾಯಿತು. ಲಾಲ್ಬಹದ್ದೂರ್ ಶಾಸ್ತ್ರಿ ಮತ್ತು ಮೊರಾರ್ಜಿ ದೇಸಾಯಿ ಹಕ್ಕು ಮಂಡಿಸಿದರು. ಮೊರಾರ್ಜಿ ವಯಸ್ಸಿನಲ್ಲಿ ದೊಡ್ಡವರು. ರಾಜಕೀಯ ಅನುಭವ ಇದ್ದವರು. ನೇರ– ನಿಷ್ಠುರ, ಯಾರಿಗೂ ಸೊಪ್ಪು ಹಾಕದ ಅವರ ನಡವಳಿಕೆ ಬಹುತೇಕ ಕಾಂಗ್ರೆಸ್ಸಿಗರಿಗೆ ಹಿಡಿಸುತ್ತಿರಲಿಲ್ಲ. ಹೀಗಾಗಿ ಮೃದು ಸ್ವಭಾವದ ಶಾಸ್ತ್ರಿ ಅವರಿಗೆ ಅದೃಷ್ಟ ಒಲಿಯಿತು.<br /> <br /> ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕಾಮರಾಜ್, ಬಂಗಾಳದ ಅತುಲ್ಯ ಘೋಷ್, ಮುಂಬೈನ ಎಸ್.ಕೆ. ಪಾಟೀಲ, ಆಂಧ್ರ ಪ್ರದೇಶದ ನೀಲಂ ಸಂಜೀವ ರೆಡ್ಡಿ, ಆಗಿನ ಮೈಸೂರು ರಾಜ್ಯದ ಎಸ್.ನಿಜಲಿಂಗಪ್ಪ ಅವರನ್ನೊಳಗೊಂಡಿದ್ದ ‘ಸಿಂಡಿಕೇಟ್’ ಮಾರ್ಗದರ್ಶನದಲ್ಲಿ ಶಾಸ್ತ್ರಿ ಪ್ರಧಾನಿಯಾಗಿ ಅವಿರೋಧವಾಗಿ ಆಯ್ಕೆಯಾದರು. ಸಿಂಡಿಕೇಟ್ ನಾಯಕರಿಗೆ ತಮ್ಮ ಅಧೀನದಲ್ಲಿ ಕೆಲಸ ಮಾಡುವ ವ್ಯಕ್ತಿ ಬೇಕಿತ್ತು. ಹೀಗಾಗಿ ಶಾಸ್ತ್ರಿ ನೇಮಕ ಅನಿವಾರ್ಯವಾಯಿತು. ಆಗ ಮೊರಾರ್ಜಿ ಮನಸು ಮಾಡಿದ್ದರೆ ಪಕ್ಷ ಒಡೆಯಬಹುದಿತ್ತು. ಹಾಗೆ ಮಾಡದೆ ಘನತೆಯಿಂದ ನಡೆದುಕೊಂಡರು.<br /> <br /> ಶಾಸ್ತ್ರಿ 1964ರ ಜೂನ್ ಎರಡರಂದು ಅಧಿಕಾರ ವಹಿಸಿಕೊಂಡರು. ಹೆಚ್ಚುಕಡಿಮೆ ನೆಹರೂ ಸಂಪುಟ ಸದಸ್ಯರೇ ಶಾಸ್ತ್ರಿ ಸಂಪುಟದಲ್ಲೂ ಮುಂದುವರಿದರು. ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಅವರನ್ನು ಹೊಸದಾಗಿ ಸಚಿವರಾಗಿ ನೇಮಕ ಮಾಡಿಕೊಂಡರು. ವಾರ್ತಾ ಮತ್ತು ಪ್ರಸಾರ ಖಾತೆಯ ಹೊಣೆ ಕೊಟ್ಟರು. ಒಂದು ಅರ್ಥದಲ್ಲಿ ಕುಟುಂಬ ರಾಜಕಾರಣದ ಬೀಜ ಬಿತ್ತಿದವರೇ ಶಾಸ್ತ್ರಿ! ಅಕಸ್ಮಾತ್ ಆಗ ಇಂದಿರಾ ಅವರನ್ನು ಕರೆತಂದು ಮಂತ್ರಿ ಮಾಡಿರದಿದ್ದರೆ ನೆಹರೂ–ಗಾಂಧಿ ಕುಟುಂಬ ರಾಜಕೀಯವಾಗಿ ಏನಾಗುತ್ತಿತ್ತೋ? ನೆಹರೂ ಮನೆತನದ ರಾಜಕಾರಣ ಅಲ್ಲಿಗೇ ಮುಗಿಯುತ್ತಿತ್ತೇನೋ?<br /> <br /> ಶಾಸ್ತ್ರಿ ಯುಗ ಕೇವಲ ಹತ್ತೊಂಬತ್ತು ತಿಂಗಳಲ್ಲಿ ಅಂತ್ಯವಾಯಿತು. ತಾಷ್ಕೆಂಟ್ಗೆ ತೆರಳಿದ್ದ ಶಾಸ್ತ್ರಿ 1966ರ ಜನವರಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಎರಡು ವರ್ಷದಲ್ಲಿ ಎರಡನೇ ಬಾರಿಗೆ ‘ಪ್ರಧಾನಿ ಯಾರು?’ ಎನ್ನುವ ಪ್ರಶ್ನೆ ಉದ್ಭವಿಸಿತು. ಪುನಃ ಮೊರಾರ್ಜಿ ಹೆಸರು ಮುಂಚೂಣಿಗೆ ಬಂತು. ಕಾಮರಾಜ್ ಸಿಂಡಿಕೇಟ್ ಹೊಸಬರಿಗಾಗಿ ಹುಡುಕಾಟ ನಡೆಸಿದಾಗ ಕಂಡಿದ್ದು ಇಂದಿರಾ ಗಾಂಧಿ. ಆಗಲೂ ಮೊರಾರ್ಜಿ ಅವರಿಗೆ ಅದೃಷ್ಟ ಕೈಕೊಟ್ಟಿತು. ಒಟ್ಟು ಹದಿನಾಲ್ಕರಲ್ಲಿ ಹನ್ನೆರಡು ಮುಖ್ಯಮಂತ್ರಿಗಳು ಇಂದಿರಾ ಅವರ ಬೆಂಬಲಕ್ಕೆ ಬಂದರು. ಇಂದಿರಾ ತಮ್ಮ ನೆರಳಲ್ಲೇ ಮುನ್ನಡೆಯಬೇಕು ಎನ್ನುವುದು ಕಾಂಗ್ರೆಸ್ ಸಿಂಡಿಕೇಟ್ ಅಪೇಕ್ಷೆ ಆಗಿತ್ತು. ಆದರೆ, ನಡೆದಿದ್ದೇ ಬೇರೆ. ಇಂದಿರಾ ಕ್ರಮೇಣ ಸಿಂಡಿಕೇಟ್ ಅನ್ನು ದುರ್ಬಲಗೊಳಿಸಿದರು. ಕಾಂಗ್ರೆಸ್ ಪಕ್ಷದ ಮೇಲೆ ಹಿಡಿತ ಸಾಧಿಸಿದರು.<br /> <br /> ಇಂದಿರಾ ಅವರ ಎರಡನೇ ಪುತ್ರ ಸಂಜಯ್ ಅಮ್ಮನ ಆಸರೆಯಲ್ಲಿ ರಾಜಕೀಯ ಹೆಜ್ಜೆ ಇಡಲಾರಂಭಿಸಿದರು. ತಮ್ಮ ನಂತರ ಸಂಜಯ್ ದೇಶದ ಚುಕ್ಕಾಣಿ ಹಿಡಿಯಬೇಕು ಎನ್ನುವುದು ಮಾಜಿ ಪ್ರಧಾನಿ ಕನಸಾಗಿತ್ತೇನೋ. ಆದರೆ, 1980ರಲ್ಲಿ ಸಂಜಯ್ ವಿಮಾನ ಅಪಘಾತದಲ್ಲಿ ಮೃತಪಟ್ಟರು. ಆಗ ಇಂದಿರಾ ಅವರು ಪೈಲಟ್ ಆಗಿದ್ದ ರಾಜೀವ್ ಗಾಂಧಿ ಅವರನ್ನು ರಾಜಕಾರಣಕ್ಕೆ ಬಲವಂತವಾಗಿ ಕರೆತಂದರು. ಎಳೆದು ತಂದರೆಂದು ಹೇಳಿದರೂ ತಪ್ಪಲ್ಲ. ಒಲ್ಲದ ಮನಸ್ಸಿನಿಂದಲೇ ಅಮ್ಮನನ್ನು ಹಿಂಬಾಲಿಸಿದ ರಾಜೀವ್, ಸಂಜಯ್ ನಿಧನದಿಂದ ತೆರವಾಗಿದ್ದ ಅಮೇಠಿ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾದರು. ಪಕ್ಷ ಕೊಟ್ಟ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರು.<br /> <br /> 1984ರ ಅಕ್ಟೋಬರ್ 31ರಂದು ಬೆಳಿಗ್ಗೆ ಇಂದಿರಾ ತಮ್ಮ ಭದ್ರತಾ ಪಡೆ ಸಿಬ್ಬಂದಿ ಗುಂಡಿಗೆ ಬಲಿಯಾದರು. ಅಂದೇ ರಾಜೀವ್ ತಾಯಿಯ ಉತ್ತರಾಧಿಕಾರಿ ಆದರು. ನಂತರ ಅಕಾಲಿಕ ಸಾವು ಅವರನ್ನೂ ಬಿಡದೆ ಹಿಂಬಾಲಿಸಿತು. 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ರಾಜೀವ್ ಬಲಿಯಾದರು. ಹನ್ನೊಂದು ವರ್ಷದಲ್ಲಿ ಗಾಂಧಿ ಕುಟುಂಬ ತನ್ನ ಮೂವರು ಸದಸ್ಯರನ್ನು ಕಳೆದುಕೊಂಡು ಆತಂಕಕ್ಕೊಳಗಾಯಿತು. ಏಳು ವರ್ಷ ರಾಜಕೀಯ ಅಜ್ಞಾತವಾಸ ಅನುಭವಿಸಲು ಇದೂ ಕಾರಣವಿರಬಹುದು.<br /> <br /> ಏಳು ವರ್ಷ ಕುಟುಂಬ ರಾಜಕಾರಣದಿಂದ ಮುಕ್ತವಾಗಿದ್ದ ಕಾಂಗ್ರೆಸ್ ಪುನಃ ಗಾಂಧಿ ಕುಟುಂಬದ ಹಿಡಿತಕ್ಕೆ ಮರಳಿತು. ಐದು ವರ್ಷ ಪಿ.ವಿ. ನರಸಿಂಹ ರಾವ್ ನೇತೃತ್ವದ ಸರ್ಕಾರ ಆಡಳಿತ ನಡೆಸಿತು. ಆರ್ಥಿಕ ಸುಧಾರಣೆ ಕ್ರಮಗಳಿಗೆ ರಾವ್ ನಾಂದಿ ಹಾಡಿದರು. ತೀವ್ರ ವಿರೋಧದ ನಡುವೆಯೂ ಉದಾರೀಕರಣ–ಜಾಗತೀಕರಣಕ್ಕೆ ಬಾಗಿಲು ತೆರೆದರು. ಏಳು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಬಹಳಷ್ಟು ಬೆಳವಣಿಗೆಗಳು ಆಗಿದ್ದವು. ಗಾಂಧಿ ಕುಟುಂಬದ ಸದಸ್ಯರಿಲ್ಲದೆ ಪಕ್ಷ ಮುನ್ನಡೆಸುವುದು ಕಷ್ಟವೆಂಬ ವಾತಾವರಣ ಸೃಷ್ಟಿಯಾಗಿತ್ತು. ರಾಜಕಾರಣ ಬೇಡವೆನ್ನುತ್ತಿದ್ದ ಸೋನಿಯಾ ಅವರನ್ನು ಮನವೊಲಿಸಿ 1998ರಲ್ಲಿ ಅವರಿಗೆ ಪಕ್ಷದ ನಾಯಕತ್ವ ವಹಿಸಲಾಯಿತು.<br /> <br /> ಸೋನಿಯಾ ಅವರ ಹಿಂದೆಯೇ ರಾಜಕೀಯ ಪ್ರವೇಶ ಮಾಡಿದ ರಾಹುಲ್ ಪಕ್ಷದ ಉಪಾಧ್ಯಕ್ಷ. ಲೋಕಸಭೆ ಚುನಾವಣೆ ಪ್ರಚಾರದ ನೇತೃತ್ವವನ್ನು ಅವರಿಗೆ ವಹಿಸಲಾಗಿದೆ. ನೆಹರೂ, ಇಂದಿರಾ ಹಾಗೂ ರಾಜೀವ್ ಗಾಂಧಿ ಅವರ ನೇತೃತ್ವದಲ್ಲಿ ಏರುಗತಿಯಲ್ಲಿ ಸಾಗಿದ್ದ ಕಾಂಗ್ರೆಸ್ ಪಕ್ಷ ಸೋನಿಯಾ ಮತ್ತು ರಾಹುಲ್ ನಾಯಕತ್ವದಲ್ಲಿ ಸೊರಗಿದೆ. ಒಂದರ ಹಿಂದೆ ಮತ್ತೊಂದರಂತೆ ಬಂದೆರಗಿದ ಭ್ರಷ್ಟಾಚಾರ ಹಗರಣಗಳು ಪಕ್ಷ ಮತ್ತು ಸರ್ಕಾರದ ವರ್ಚಸ್ಸನ್ನು ಕುಗ್ಗಿಸಿವೆ. ಹಿರಿಯ ತಲೆಮಾರಿನ ಜನ ಸೋನಿಯಾ ಮತ್ತು ರಾಹುಲ್ ಸಾಮರ್ಥ್ಯವನ್ನು ಇಂದಿರಾ, ರಾಜೀವ್ ಜತೆ ಹೋಲಿಕೆ ಮಾಡುತ್ತಿದ್ದಾರೆ.<br /> <br /> ರಾಜೀವ್ ಸರ್ಕಾರದಲ್ಲೂ ಬೊಫೋರ್ಸ್ ಹಗರಣ ನಡೆದಿತ್ತು. ಇಂದಿರಾ ಮೇಲೂ ಭ್ರಷ್ಟಾಚಾರ ಆರೋಪಗಳು ಕೇಳಿಬಂದಿತ್ತು. ಆದರೂ ಪಕ್ಷ ಇಷ್ಟೊಂದು ಅಧೋಗತಿಗೆ ಇಳಿದಿರಲಿಲ್ಲ. ಈಗ ತಾಯಿ– ಮಗನ ನೇತೃತ್ವದಲ್ಲಿ ಪಕ್ಷ ಚೇತರಿಸಿಕೊಳ್ಳಲು ಸಾಧ್ಯವಿಲ್ಲವೇನೊ ಎನ್ನುವ ಸ್ಥಿತಿಗೆ ತಲುಪಿದೆ. ಕಾಂಗ್ರೆಸ್ ಕಥೆ ಮುಗಿಯಿತು ಎಂಬಂತೆ ಮಾಧ್ಯಮಗಳಲ್ಲಿ ಪ್ರಚಾರ ನಡೆದಿದೆ. ಒಂದು ದಶಕದ ಯುಪಿಎ ಆಡಳಿತ ಜನರಲ್ಲಿ ಹತಾಶೆ ಮೂಡಿಸಿದೆ ಎನ್ನುವುದು ಅತಿಶಯೋಕ್ತಿ ಅಲ್ಲ.<br /> <br /> ‘ಊರು ದೋಚಿದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬ ಗಾದೆ ಯಂತೆ ಸೋನಿಯಾ ಮತ್ತು ರಾಹುಲ್ ಕೊನೆ ಗಳಿಗೆಯಲ್ಲಿ ಎಚ್ಚೆತ್ತುಕೊಂಡಿದ್ದಾರೆ. ಆಹಾರ ಭದ್ರತೆ ಕಾಯ್ದೆ, ಲೋಕಪಾಲ ಮಸೂದೆ ಜಾರಿಯಂಥ ಕ್ರಮ ಕೈಗೊಂಡಿದ್ದಾರೆ. ಇವು ಸರ್ಕಾರದ ನೇತೃತ್ವ ವಹಿಸಿರುವ ಪಕ್ಷದ ನೆರವಿಗೆ ಬರುವುದೇ ಎಂಬ ಪ್ರಶ್ನೆಗೆ ಮತದಾರರೇ ಉತ್ತರ ಹೇಳಬೇಕು. ಉತ್ತರ ಸಿಗಲು ಚುನಾವಣೆ ಫಲಿತಾಂಶ ಬರುವವರೆಗೂ ಕಾಯಬೇಕು.<br /> <br /> ಮರಳಿ ಕುಟುಂಬ ರಾಜಕಾರಣದ ವಿಷಯಕ್ಕೆ ಬಂದರೆ, ಇದು ನೆಹರೂ ಕುಟುಂಬಕ್ಕೆ ಮತ್ತು ಕಾಂಗ್ರೆಸ್ಗೆ ಸೀಮಿತವಾಗಿಲ್ಲ. ಮತೀಯ ರಾಜಕಾರಣಕ್ಕೆ ಜೋತು ಬಿದ್ದಿರುವ ಬಿಜೆಪಿಯಲ್ಲೂ ನೆಹರೂ–ಗಾಂಧಿ ಕುಟುಂಬದ ಸದಸ್ಯರಿದ್ದಾರೆ. ಸಂಜಯ್ ಗಾಂಧಿ ಅವರ ಪತ್ನಿ ಮೇನಕಾ ಗಾಂಧಿ, ಪುತ್ರ ವರುಣ್ ಗಾಂಧಿ ಬಿಜೆಪಿಯ ಪ್ರಮುಖ ನಾಯಕರು.<br /> <br /> ರಾಜೀವ್ ಪುತ್ರಿ ಪ್ರಿಯಾಂಕಾ ಗಾಂಧಿ ಅವರನ್ನೂ ರಾಜಕಾರಣಕ್ಕೆ ಕರೆತರಬೇಕು ಎಂಬ ಬೇಡಿಕೆ ಪಕ್ಷದ ಕಾರ್ಯಕರ್ತರು ಮತ್ತು ಕೆಲವು ಮುಖಂಡರಿಂದ ಬಂದಿತ್ತು. ಸೋನಿಯಾ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಪ್ರಿಯಾಂಕಾ ಸಂಸದರಲ್ಲದಿದ್ದರೂ ತಾಯಿ ಮತ್ತು ಸೋದರನ ಕ್ಷೇತ್ರಗಳ ಜವಾಬ್ದಾರಿ ನಿಭಾಯಿಸುವ ಹೊಣೆ ಹೊತ್ತಿದ್ದಾರೆ. 2014ರ ಚುನಾವಣೆಯಲ್ಲೂ ಅವರು ಕುಟುಂಬ ಸದಸ್ಯರ ಪರವಾಗಿ ಪ್ರಚಾರ ಮಾಡಲಿದ್ದಾರೆ.<br /> <br /> ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ರಾಜಕಾರಣಕ್ಕೆ ಪರಿಚಯಿಸಲು ನೇತಾರರಲ್ಲಿ ಪೈಪೋಟಿ ನಡೆದಿದೆ. ರಾಜಕಾರಣ ತಮ್ಮ ಆಜನ್ಮ ಸಿದ್ಧ ಹಕ್ಕು ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಇಂಥ ಮನೋಧರ್ಮದ ನಾಯಕರು ಎಲ್ಲ ಕಾಲದಲ್ಲೂ ಎಲ್ಲ ಪಕ್ಷಗಳಲ್ಲೂ ಇದ್ದಾರೆ. ರಾಜಕಾರಣ ಸ್ವಂತ ಆಸ್ತಿಯಲ್ಲ. ಎಲ್ಲರಿಗೂ ಅವಕಾಶ ಸಿಗಬೇಕು ಎಂದು ಪ್ರತಿಪಾದಿಸುವ ನಾಯಕರು ಅಲ್ಲೊಬ್ಬರು, ಇಲ್ಲೊಬ್ಬರು ಸಿಗುತ್ತಾರೆ. ಅವರೂ ಸಂಕುಚಿತ ಮನೋಧರ್ಮದ ರಾಜಕಾರಣಿಗಳಂತೆ ಆಲೋಚನೆ ಮಾಡಿದರೆ ಪ್ರಜಾಪ್ರಭುತ್ವ ಅರ್ಥ–ಮೌಲ್ಯ ಕಳೆದುಕೊಳ್ಳುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕುಟುಂಬ ರಾಜಕಾರಣ ಮತ್ತು ಮತೀಯ ರಾಜಕಾರಣ ಎರಡು ಅತಿರೇಕಗಳು. ಬಹುಶಃ ಇವೆರಡೂ ಶಾಪಗಳು ಭಾರತದ ಪ್ರಜಾಪ್ರಭುತ್ವಕ್ಕೆ ಅಂಟಿರದಿದ್ದರೆ ನಮ್ಮ ವ್ಯವಸ್ಥೆಯಷ್ಟು ಸೊಗಸಾದುದು ಮತ್ತೊಂದು ಇರುತ್ತಿರಲಿಲ್ಲವೇನೊ! ಸುಮಾರು ಐದು ದಶಕಗಳ ಇತಿಹಾಸವಿರುವ ಕುಟುಂಬ ರಾಜಕಾರಣ ಮತ್ತು ಸ್ವಾತಂತ್ರ್ಯಪೂರ್ವದಿಂದಲೂ ‘ಗುಮ್ಮ’ನಂತೆ ಹಿಂಬಾಲಿಸುತ್ತಿರುವ ಮತೀಯ ರಾಜಕಾರಣ ಇವೆರಡರಲ್ಲಿ ಯಾವುದು ಹೆಚ್ಚು ಅಥವಾ ಯಾವುದು ಕಡಿಮೆ ಹಾನಿಕರ ಎಂದು ತೀರ್ಮಾನಿಸುವುದು ಕಷ್ಟ.<br /> <br /> ಮತೀಯ ರಾಜಕಾರಣ ಮತ್ತು ಕುಟುಂಬ ರಾಜಕಾರಣ ನಡುವಿನ ಜಿದ್ದಾಜಿದ್ದಿಗೆ ಏಪ್ರಿಲ್–ಮೇ ಲೋಕಸಭೆ ಚುನಾವಣೆ ಸಾಕ್ಷಿಯಾಗಲಿದೆ. ಭ್ರಷ್ಟಾಚಾರ ಹಗರಣಗಳು, ಬೆಲೆ ಏರಿಕೆ ಮತ್ತಿತರ ಸಮಸ್ಯೆಗಳು ಊಟಕ್ಕಿರುವ ಉಪ್ಪಿನಕಾಯಿಯಂತೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಈಗಾಗಲೇ ಪರಸ್ಪರ ಕೆಸರು ಎರಚಾಟದಲ್ಲಿ ತೊಡಗಿದ್ದಾರೆ. ನೆಹರೂ– ಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಚುನಾವಣಾ ಸಮರದಲ್ಲಿ ಮುಖಾಮುಖಿ ಆಗಿದ್ದಾರೆ.<br /> <br /> ಹಿರಿಯ ಪೀಳಿಗೆ ಜನ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಂದ ಹಿಡಿದು ರಾಹುಲ್ ಗಾಂಧಿವರೆಗೆ ನೆಹರೂ–ಗಾಂಧಿ ಮನೆತನದ ನಾಲ್ಕು ತಲೆಮಾರುಗಳನ್ನು ಕಂಡಿದ್ದಾರೆ. ಅವರ ರಾಜಕೀಯ ವರಸೆಗಳು– ತಂತ್ರಗಳನ್ನು ಗಮನಿಸಿದ್ದಾರೆ. ರಾಹುಲ್ ತಮ್ಮ ತಂದೆ, ಅಜ್ಜಿ ಹಾಗೂ ಮುತ್ತಜ್ಜನಂತೆ ಪ್ರಧಾನಿ ಹುದ್ದೆಗೆ ಏರುವರೇ ಎಂದು ಭವಿಷ್ಯ ಹೇಳುವುದು ಕಷ್ಟ. ಕಾಲವೇ ಇದಕ್ಕೆಲ್ಲ ಉತ್ತರಿಸಬೇಕು. ಆದರೆ, ಜನ ನೆಹರೂ– ಗಾಂಧಿ ಕುಟುಂಬದ ಮೇಲೆ ಪ್ರೀತಿ ತೋರುತ್ತಾ ಬಂದಿದ್ದಾರೆ. ಅವರ ರಾಜಕಾರಣಕ್ಕೆ ಒಪ್ಪಿಗೆಯ ಮುದ್ರೆ ಒತ್ತುತ್ತಾ ಬಂದಿದ್ದಾರೆ. ಯಾವುದೋ ಒಂದು ಚುನಾವಣೆಯಲ್ಲಿ ಕೈಬಿಟ್ಟರೆ ಮತ್ತೊಂದು ಚುನಾವಣೆಯಲ್ಲಿ ಕೈ ಹಿಡಿದಿದ್ದಾರೆ.<br /> <br /> ಆಧುನಿಕ ಭಾರತದ ರೂವಾರಿ ನೆಹರೂ 1964ರ ಮೇನಲ್ಲಿ ನಿಧನರಾದಾಗ ಉತ್ತರಾಧಿಕಾರಿ ಯಾರಾಗಬೇಕು ಎಂಬ ಪ್ರಶ್ನೆ ಕಾಂಗ್ರೆಸ್ಸಿನ ಹಿರಿಯ ನಾಯಕರಿಗೆ ಎದುರಾಯಿತು. ಲಾಲ್ಬಹದ್ದೂರ್ ಶಾಸ್ತ್ರಿ ಮತ್ತು ಮೊರಾರ್ಜಿ ದೇಸಾಯಿ ಹಕ್ಕು ಮಂಡಿಸಿದರು. ಮೊರಾರ್ಜಿ ವಯಸ್ಸಿನಲ್ಲಿ ದೊಡ್ಡವರು. ರಾಜಕೀಯ ಅನುಭವ ಇದ್ದವರು. ನೇರ– ನಿಷ್ಠುರ, ಯಾರಿಗೂ ಸೊಪ್ಪು ಹಾಕದ ಅವರ ನಡವಳಿಕೆ ಬಹುತೇಕ ಕಾಂಗ್ರೆಸ್ಸಿಗರಿಗೆ ಹಿಡಿಸುತ್ತಿರಲಿಲ್ಲ. ಹೀಗಾಗಿ ಮೃದು ಸ್ವಭಾವದ ಶಾಸ್ತ್ರಿ ಅವರಿಗೆ ಅದೃಷ್ಟ ಒಲಿಯಿತು.<br /> <br /> ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕಾಮರಾಜ್, ಬಂಗಾಳದ ಅತುಲ್ಯ ಘೋಷ್, ಮುಂಬೈನ ಎಸ್.ಕೆ. ಪಾಟೀಲ, ಆಂಧ್ರ ಪ್ರದೇಶದ ನೀಲಂ ಸಂಜೀವ ರೆಡ್ಡಿ, ಆಗಿನ ಮೈಸೂರು ರಾಜ್ಯದ ಎಸ್.ನಿಜಲಿಂಗಪ್ಪ ಅವರನ್ನೊಳಗೊಂಡಿದ್ದ ‘ಸಿಂಡಿಕೇಟ್’ ಮಾರ್ಗದರ್ಶನದಲ್ಲಿ ಶಾಸ್ತ್ರಿ ಪ್ರಧಾನಿಯಾಗಿ ಅವಿರೋಧವಾಗಿ ಆಯ್ಕೆಯಾದರು. ಸಿಂಡಿಕೇಟ್ ನಾಯಕರಿಗೆ ತಮ್ಮ ಅಧೀನದಲ್ಲಿ ಕೆಲಸ ಮಾಡುವ ವ್ಯಕ್ತಿ ಬೇಕಿತ್ತು. ಹೀಗಾಗಿ ಶಾಸ್ತ್ರಿ ನೇಮಕ ಅನಿವಾರ್ಯವಾಯಿತು. ಆಗ ಮೊರಾರ್ಜಿ ಮನಸು ಮಾಡಿದ್ದರೆ ಪಕ್ಷ ಒಡೆಯಬಹುದಿತ್ತು. ಹಾಗೆ ಮಾಡದೆ ಘನತೆಯಿಂದ ನಡೆದುಕೊಂಡರು.<br /> <br /> ಶಾಸ್ತ್ರಿ 1964ರ ಜೂನ್ ಎರಡರಂದು ಅಧಿಕಾರ ವಹಿಸಿಕೊಂಡರು. ಹೆಚ್ಚುಕಡಿಮೆ ನೆಹರೂ ಸಂಪುಟ ಸದಸ್ಯರೇ ಶಾಸ್ತ್ರಿ ಸಂಪುಟದಲ್ಲೂ ಮುಂದುವರಿದರು. ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಅವರನ್ನು ಹೊಸದಾಗಿ ಸಚಿವರಾಗಿ ನೇಮಕ ಮಾಡಿಕೊಂಡರು. ವಾರ್ತಾ ಮತ್ತು ಪ್ರಸಾರ ಖಾತೆಯ ಹೊಣೆ ಕೊಟ್ಟರು. ಒಂದು ಅರ್ಥದಲ್ಲಿ ಕುಟುಂಬ ರಾಜಕಾರಣದ ಬೀಜ ಬಿತ್ತಿದವರೇ ಶಾಸ್ತ್ರಿ! ಅಕಸ್ಮಾತ್ ಆಗ ಇಂದಿರಾ ಅವರನ್ನು ಕರೆತಂದು ಮಂತ್ರಿ ಮಾಡಿರದಿದ್ದರೆ ನೆಹರೂ–ಗಾಂಧಿ ಕುಟುಂಬ ರಾಜಕೀಯವಾಗಿ ಏನಾಗುತ್ತಿತ್ತೋ? ನೆಹರೂ ಮನೆತನದ ರಾಜಕಾರಣ ಅಲ್ಲಿಗೇ ಮುಗಿಯುತ್ತಿತ್ತೇನೋ?<br /> <br /> ಶಾಸ್ತ್ರಿ ಯುಗ ಕೇವಲ ಹತ್ತೊಂಬತ್ತು ತಿಂಗಳಲ್ಲಿ ಅಂತ್ಯವಾಯಿತು. ತಾಷ್ಕೆಂಟ್ಗೆ ತೆರಳಿದ್ದ ಶಾಸ್ತ್ರಿ 1966ರ ಜನವರಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಎರಡು ವರ್ಷದಲ್ಲಿ ಎರಡನೇ ಬಾರಿಗೆ ‘ಪ್ರಧಾನಿ ಯಾರು?’ ಎನ್ನುವ ಪ್ರಶ್ನೆ ಉದ್ಭವಿಸಿತು. ಪುನಃ ಮೊರಾರ್ಜಿ ಹೆಸರು ಮುಂಚೂಣಿಗೆ ಬಂತು. ಕಾಮರಾಜ್ ಸಿಂಡಿಕೇಟ್ ಹೊಸಬರಿಗಾಗಿ ಹುಡುಕಾಟ ನಡೆಸಿದಾಗ ಕಂಡಿದ್ದು ಇಂದಿರಾ ಗಾಂಧಿ. ಆಗಲೂ ಮೊರಾರ್ಜಿ ಅವರಿಗೆ ಅದೃಷ್ಟ ಕೈಕೊಟ್ಟಿತು. ಒಟ್ಟು ಹದಿನಾಲ್ಕರಲ್ಲಿ ಹನ್ನೆರಡು ಮುಖ್ಯಮಂತ್ರಿಗಳು ಇಂದಿರಾ ಅವರ ಬೆಂಬಲಕ್ಕೆ ಬಂದರು. ಇಂದಿರಾ ತಮ್ಮ ನೆರಳಲ್ಲೇ ಮುನ್ನಡೆಯಬೇಕು ಎನ್ನುವುದು ಕಾಂಗ್ರೆಸ್ ಸಿಂಡಿಕೇಟ್ ಅಪೇಕ್ಷೆ ಆಗಿತ್ತು. ಆದರೆ, ನಡೆದಿದ್ದೇ ಬೇರೆ. ಇಂದಿರಾ ಕ್ರಮೇಣ ಸಿಂಡಿಕೇಟ್ ಅನ್ನು ದುರ್ಬಲಗೊಳಿಸಿದರು. ಕಾಂಗ್ರೆಸ್ ಪಕ್ಷದ ಮೇಲೆ ಹಿಡಿತ ಸಾಧಿಸಿದರು.<br /> <br /> ಇಂದಿರಾ ಅವರ ಎರಡನೇ ಪುತ್ರ ಸಂಜಯ್ ಅಮ್ಮನ ಆಸರೆಯಲ್ಲಿ ರಾಜಕೀಯ ಹೆಜ್ಜೆ ಇಡಲಾರಂಭಿಸಿದರು. ತಮ್ಮ ನಂತರ ಸಂಜಯ್ ದೇಶದ ಚುಕ್ಕಾಣಿ ಹಿಡಿಯಬೇಕು ಎನ್ನುವುದು ಮಾಜಿ ಪ್ರಧಾನಿ ಕನಸಾಗಿತ್ತೇನೋ. ಆದರೆ, 1980ರಲ್ಲಿ ಸಂಜಯ್ ವಿಮಾನ ಅಪಘಾತದಲ್ಲಿ ಮೃತಪಟ್ಟರು. ಆಗ ಇಂದಿರಾ ಅವರು ಪೈಲಟ್ ಆಗಿದ್ದ ರಾಜೀವ್ ಗಾಂಧಿ ಅವರನ್ನು ರಾಜಕಾರಣಕ್ಕೆ ಬಲವಂತವಾಗಿ ಕರೆತಂದರು. ಎಳೆದು ತಂದರೆಂದು ಹೇಳಿದರೂ ತಪ್ಪಲ್ಲ. ಒಲ್ಲದ ಮನಸ್ಸಿನಿಂದಲೇ ಅಮ್ಮನನ್ನು ಹಿಂಬಾಲಿಸಿದ ರಾಜೀವ್, ಸಂಜಯ್ ನಿಧನದಿಂದ ತೆರವಾಗಿದ್ದ ಅಮೇಠಿ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾದರು. ಪಕ್ಷ ಕೊಟ್ಟ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರು.<br /> <br /> 1984ರ ಅಕ್ಟೋಬರ್ 31ರಂದು ಬೆಳಿಗ್ಗೆ ಇಂದಿರಾ ತಮ್ಮ ಭದ್ರತಾ ಪಡೆ ಸಿಬ್ಬಂದಿ ಗುಂಡಿಗೆ ಬಲಿಯಾದರು. ಅಂದೇ ರಾಜೀವ್ ತಾಯಿಯ ಉತ್ತರಾಧಿಕಾರಿ ಆದರು. ನಂತರ ಅಕಾಲಿಕ ಸಾವು ಅವರನ್ನೂ ಬಿಡದೆ ಹಿಂಬಾಲಿಸಿತು. 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ರಾಜೀವ್ ಬಲಿಯಾದರು. ಹನ್ನೊಂದು ವರ್ಷದಲ್ಲಿ ಗಾಂಧಿ ಕುಟುಂಬ ತನ್ನ ಮೂವರು ಸದಸ್ಯರನ್ನು ಕಳೆದುಕೊಂಡು ಆತಂಕಕ್ಕೊಳಗಾಯಿತು. ಏಳು ವರ್ಷ ರಾಜಕೀಯ ಅಜ್ಞಾತವಾಸ ಅನುಭವಿಸಲು ಇದೂ ಕಾರಣವಿರಬಹುದು.<br /> <br /> ಏಳು ವರ್ಷ ಕುಟುಂಬ ರಾಜಕಾರಣದಿಂದ ಮುಕ್ತವಾಗಿದ್ದ ಕಾಂಗ್ರೆಸ್ ಪುನಃ ಗಾಂಧಿ ಕುಟುಂಬದ ಹಿಡಿತಕ್ಕೆ ಮರಳಿತು. ಐದು ವರ್ಷ ಪಿ.ವಿ. ನರಸಿಂಹ ರಾವ್ ನೇತೃತ್ವದ ಸರ್ಕಾರ ಆಡಳಿತ ನಡೆಸಿತು. ಆರ್ಥಿಕ ಸುಧಾರಣೆ ಕ್ರಮಗಳಿಗೆ ರಾವ್ ನಾಂದಿ ಹಾಡಿದರು. ತೀವ್ರ ವಿರೋಧದ ನಡುವೆಯೂ ಉದಾರೀಕರಣ–ಜಾಗತೀಕರಣಕ್ಕೆ ಬಾಗಿಲು ತೆರೆದರು. ಏಳು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಬಹಳಷ್ಟು ಬೆಳವಣಿಗೆಗಳು ಆಗಿದ್ದವು. ಗಾಂಧಿ ಕುಟುಂಬದ ಸದಸ್ಯರಿಲ್ಲದೆ ಪಕ್ಷ ಮುನ್ನಡೆಸುವುದು ಕಷ್ಟವೆಂಬ ವಾತಾವರಣ ಸೃಷ್ಟಿಯಾಗಿತ್ತು. ರಾಜಕಾರಣ ಬೇಡವೆನ್ನುತ್ತಿದ್ದ ಸೋನಿಯಾ ಅವರನ್ನು ಮನವೊಲಿಸಿ 1998ರಲ್ಲಿ ಅವರಿಗೆ ಪಕ್ಷದ ನಾಯಕತ್ವ ವಹಿಸಲಾಯಿತು.<br /> <br /> ಸೋನಿಯಾ ಅವರ ಹಿಂದೆಯೇ ರಾಜಕೀಯ ಪ್ರವೇಶ ಮಾಡಿದ ರಾಹುಲ್ ಪಕ್ಷದ ಉಪಾಧ್ಯಕ್ಷ. ಲೋಕಸಭೆ ಚುನಾವಣೆ ಪ್ರಚಾರದ ನೇತೃತ್ವವನ್ನು ಅವರಿಗೆ ವಹಿಸಲಾಗಿದೆ. ನೆಹರೂ, ಇಂದಿರಾ ಹಾಗೂ ರಾಜೀವ್ ಗಾಂಧಿ ಅವರ ನೇತೃತ್ವದಲ್ಲಿ ಏರುಗತಿಯಲ್ಲಿ ಸಾಗಿದ್ದ ಕಾಂಗ್ರೆಸ್ ಪಕ್ಷ ಸೋನಿಯಾ ಮತ್ತು ರಾಹುಲ್ ನಾಯಕತ್ವದಲ್ಲಿ ಸೊರಗಿದೆ. ಒಂದರ ಹಿಂದೆ ಮತ್ತೊಂದರಂತೆ ಬಂದೆರಗಿದ ಭ್ರಷ್ಟಾಚಾರ ಹಗರಣಗಳು ಪಕ್ಷ ಮತ್ತು ಸರ್ಕಾರದ ವರ್ಚಸ್ಸನ್ನು ಕುಗ್ಗಿಸಿವೆ. ಹಿರಿಯ ತಲೆಮಾರಿನ ಜನ ಸೋನಿಯಾ ಮತ್ತು ರಾಹುಲ್ ಸಾಮರ್ಥ್ಯವನ್ನು ಇಂದಿರಾ, ರಾಜೀವ್ ಜತೆ ಹೋಲಿಕೆ ಮಾಡುತ್ತಿದ್ದಾರೆ.<br /> <br /> ರಾಜೀವ್ ಸರ್ಕಾರದಲ್ಲೂ ಬೊಫೋರ್ಸ್ ಹಗರಣ ನಡೆದಿತ್ತು. ಇಂದಿರಾ ಮೇಲೂ ಭ್ರಷ್ಟಾಚಾರ ಆರೋಪಗಳು ಕೇಳಿಬಂದಿತ್ತು. ಆದರೂ ಪಕ್ಷ ಇಷ್ಟೊಂದು ಅಧೋಗತಿಗೆ ಇಳಿದಿರಲಿಲ್ಲ. ಈಗ ತಾಯಿ– ಮಗನ ನೇತೃತ್ವದಲ್ಲಿ ಪಕ್ಷ ಚೇತರಿಸಿಕೊಳ್ಳಲು ಸಾಧ್ಯವಿಲ್ಲವೇನೊ ಎನ್ನುವ ಸ್ಥಿತಿಗೆ ತಲುಪಿದೆ. ಕಾಂಗ್ರೆಸ್ ಕಥೆ ಮುಗಿಯಿತು ಎಂಬಂತೆ ಮಾಧ್ಯಮಗಳಲ್ಲಿ ಪ್ರಚಾರ ನಡೆದಿದೆ. ಒಂದು ದಶಕದ ಯುಪಿಎ ಆಡಳಿತ ಜನರಲ್ಲಿ ಹತಾಶೆ ಮೂಡಿಸಿದೆ ಎನ್ನುವುದು ಅತಿಶಯೋಕ್ತಿ ಅಲ್ಲ.<br /> <br /> ‘ಊರು ದೋಚಿದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬ ಗಾದೆ ಯಂತೆ ಸೋನಿಯಾ ಮತ್ತು ರಾಹುಲ್ ಕೊನೆ ಗಳಿಗೆಯಲ್ಲಿ ಎಚ್ಚೆತ್ತುಕೊಂಡಿದ್ದಾರೆ. ಆಹಾರ ಭದ್ರತೆ ಕಾಯ್ದೆ, ಲೋಕಪಾಲ ಮಸೂದೆ ಜಾರಿಯಂಥ ಕ್ರಮ ಕೈಗೊಂಡಿದ್ದಾರೆ. ಇವು ಸರ್ಕಾರದ ನೇತೃತ್ವ ವಹಿಸಿರುವ ಪಕ್ಷದ ನೆರವಿಗೆ ಬರುವುದೇ ಎಂಬ ಪ್ರಶ್ನೆಗೆ ಮತದಾರರೇ ಉತ್ತರ ಹೇಳಬೇಕು. ಉತ್ತರ ಸಿಗಲು ಚುನಾವಣೆ ಫಲಿತಾಂಶ ಬರುವವರೆಗೂ ಕಾಯಬೇಕು.<br /> <br /> ಮರಳಿ ಕುಟುಂಬ ರಾಜಕಾರಣದ ವಿಷಯಕ್ಕೆ ಬಂದರೆ, ಇದು ನೆಹರೂ ಕುಟುಂಬಕ್ಕೆ ಮತ್ತು ಕಾಂಗ್ರೆಸ್ಗೆ ಸೀಮಿತವಾಗಿಲ್ಲ. ಮತೀಯ ರಾಜಕಾರಣಕ್ಕೆ ಜೋತು ಬಿದ್ದಿರುವ ಬಿಜೆಪಿಯಲ್ಲೂ ನೆಹರೂ–ಗಾಂಧಿ ಕುಟುಂಬದ ಸದಸ್ಯರಿದ್ದಾರೆ. ಸಂಜಯ್ ಗಾಂಧಿ ಅವರ ಪತ್ನಿ ಮೇನಕಾ ಗಾಂಧಿ, ಪುತ್ರ ವರುಣ್ ಗಾಂಧಿ ಬಿಜೆಪಿಯ ಪ್ರಮುಖ ನಾಯಕರು.<br /> <br /> ರಾಜೀವ್ ಪುತ್ರಿ ಪ್ರಿಯಾಂಕಾ ಗಾಂಧಿ ಅವರನ್ನೂ ರಾಜಕಾರಣಕ್ಕೆ ಕರೆತರಬೇಕು ಎಂಬ ಬೇಡಿಕೆ ಪಕ್ಷದ ಕಾರ್ಯಕರ್ತರು ಮತ್ತು ಕೆಲವು ಮುಖಂಡರಿಂದ ಬಂದಿತ್ತು. ಸೋನಿಯಾ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಪ್ರಿಯಾಂಕಾ ಸಂಸದರಲ್ಲದಿದ್ದರೂ ತಾಯಿ ಮತ್ತು ಸೋದರನ ಕ್ಷೇತ್ರಗಳ ಜವಾಬ್ದಾರಿ ನಿಭಾಯಿಸುವ ಹೊಣೆ ಹೊತ್ತಿದ್ದಾರೆ. 2014ರ ಚುನಾವಣೆಯಲ್ಲೂ ಅವರು ಕುಟುಂಬ ಸದಸ್ಯರ ಪರವಾಗಿ ಪ್ರಚಾರ ಮಾಡಲಿದ್ದಾರೆ.<br /> <br /> ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ರಾಜಕಾರಣಕ್ಕೆ ಪರಿಚಯಿಸಲು ನೇತಾರರಲ್ಲಿ ಪೈಪೋಟಿ ನಡೆದಿದೆ. ರಾಜಕಾರಣ ತಮ್ಮ ಆಜನ್ಮ ಸಿದ್ಧ ಹಕ್ಕು ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಇಂಥ ಮನೋಧರ್ಮದ ನಾಯಕರು ಎಲ್ಲ ಕಾಲದಲ್ಲೂ ಎಲ್ಲ ಪಕ್ಷಗಳಲ್ಲೂ ಇದ್ದಾರೆ. ರಾಜಕಾರಣ ಸ್ವಂತ ಆಸ್ತಿಯಲ್ಲ. ಎಲ್ಲರಿಗೂ ಅವಕಾಶ ಸಿಗಬೇಕು ಎಂದು ಪ್ರತಿಪಾದಿಸುವ ನಾಯಕರು ಅಲ್ಲೊಬ್ಬರು, ಇಲ್ಲೊಬ್ಬರು ಸಿಗುತ್ತಾರೆ. ಅವರೂ ಸಂಕುಚಿತ ಮನೋಧರ್ಮದ ರಾಜಕಾರಣಿಗಳಂತೆ ಆಲೋಚನೆ ಮಾಡಿದರೆ ಪ್ರಜಾಪ್ರಭುತ್ವ ಅರ್ಥ–ಮೌಲ್ಯ ಕಳೆದುಕೊಳ್ಳುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>