ಮಂಗಳೂರು: ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಮಿಜಾರು ಅಣ್ಣಪ್ಪ (89) ಅವರು ಭಾನುವಾರ ಮೂಡುಬಿದಿರೆ ಸಮೀಪದ ಮಿಜಾರಿನ ತಮ್ಮ ನಿವಾಸದಲ್ಲಿ ನಿಧನರಾದರು.
ತುಳು ಯಕ್ಷಗಾನ ರಂಗದಲ್ಲಿ ಹಾಸ್ಯ ಪಾತ್ರಕ್ಕೆ ತಾರಾಗಿರಿ ತಂದುಕೊಟ್ಟ ಮಿಜಾರು ಅಣ್ಣಪ್ಪ ಅವರ ‘ಪಟ್ಟದ ಪದ್ಮಲೆ’, ‘ಕಾಡಮಲ್ಲಿಗೆ’ ಯಕ್ಷಗಾನ ನೋಡಿದವರು ಈಗಲೂ ಅವರ ಪಾತ್ರವನ್ನು ಮರೆತಿಲ್ಲ.
ಕೊಂಕಣಿ ಮನೆಮಾತಾದರೂ ತುಳು ಭಾಷೆಯಲ್ಲಿ ಅತ್ಯಂತ ಪ್ರಬುದ್ಧತೆಯನ್ನು ಹೊಂದಿದ್ದ ಅಣ್ಣಪ್ಪ ಅವರು, ಕನ್ನಡ, ಸಂಸ್ಕೃತವನ್ನು ಮಿಶ್ರಣ ಮಾಡದ, ಅಪ್ಪಟ ತುಳು ಭಾಷೆಯಲ್ಲಿ ಪ್ರೇಕ್ಷಕರನ್ನು 68 ವರ್ಷಗಳ ಕಾಲ ರಂಜಿಸಿದರು.
1940ರಲ್ಲಿ ಯಕ್ಷಗಾನ ರಂಗಕ್ಕೆ ಪದಾರ್ಪಣೆ ಮಾಡಿದ ಅವರು, ಕಟೀಲು, ಇರಾ ಸೋಮನಾಥೇಶ್ವರ ಮೇಳ, ಕರ್ನಾಟಕ ಮೇಳಗಳಲ್ಲಿ ಹಾಸ್ಯ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು.