ನಾಲ್ಕು ದಶಕದ ಶಾಲೆಗೆ ಮುಚ್ಚುವ ಭೀತಿ
ಹೊಸನಗರ: ನಾಲ್ಕು ದಶಕಗಳಿಂದ ತಾಲ್ಲೂಕಿನ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿನಿಯರ ಭವಿಷ್ಯದ ಆಶಾ ದೀಪವಾಗಿದ್ದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಈಗ ಮುಚ್ಚುವ ಭೀತಿಯಲ್ಲಿದೆ.
ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿರುವ ಮೆಟ್ರಿಕ್ಪೂರ್ವ ಬಾಲಕಿಯರ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಮುಚ್ಚುವಂತೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಸೂಚನೆ ನೀಡಿದ್ದಾರೆ.
ಶರಾವತಿ, ಚಕ್ರಾ, ಸಾವೆಹಕ್ಕಲು, ವಾರಾಹಿ ವಿದ್ಯುತ್ ಯೋಜನೆಯಲ್ಲಿ ಮುಳುಗಡೆಯಾಗಿರುವ ತಾಲ್ಲೂಕಿನ ಅತಿ ಹಿಂದುಳಿದ ಹಳ್ಳಿಗಳ ಪರಿಶಿಷ್ಟ ಜಾತಿ ಮತ್ತು ವರ್ಗದ ಮಕ್ಕಳ ಶೈಕ್ಷಣಿಕ ಬದುಕು ರೂಪಿಸಲು ಇದು ಅನೇಕ ವರ್ಷಗಳಿಂದ ಅನುಕೂಲವಾಗಿತ್ತು.
ಆದರೆ ಹಾಸ್ಟೆಲ್ ಸಿಬ್ಬಂದಿ ನಡುವಿನ ಸಾಮರಸ್ಯದ ಕೊರತೆ, ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ತನೆಯ ಪರಿಣಾಮ ಸರಿಯಾಗಿ ಊಟ-ತಿಂಡಿ ಇಲ್ಲದೆ ಅರ್ಧಕ್ಕೆ ಹಾಸ್ಟೆಲ್ಗೆ ತಿಲಾಂಜಲಿ ಹೇಳಿದೆ ಘಟನೆ ಈ ಹಿಂದೆ ನಡೆದಿತ್ತು. ಈ ಬಗ್ಗೆ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿಯೂ ಸಹ ಚರ್ಚೆ ನಡೆದು, ತಪ್ಪಿತಸ್ಥ ಸಿಬ್ಬಂದಿಯನ್ನು ಹಾಸ್ಟೆಲ್ನಿಂದ ಎತ್ತಂಗಡಿ ಸಹ ಮಾಡಲಾಗಿತ್ತು.
ಈ ಮೇಲಿನ ಕಾರಣದ ಜತೆಗೆ ಹಳ್ಳಿಯ ಪರಿಶಿಷ್ಟ ಜಾತಿ ಮತ್ತು ವರ್ಗದ ಮಕ್ಕಳಿಗೆ ಸಾಕಷ್ಟು ಈ ಬಗ್ಗೆ ಪ್ರಚಾರದ ಕೊರತೆಯಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ ಆಗಲು ಪ್ರಮುಖ ಕಾರಣ ಎನ್ನುವ ದೂರು ಸಹ ಕೇಳಿಬರುತ್ತಿದೆ. ಸುಮಾರು ್ಙ 20 ಲಕ್ಷ ವೆಚ್ಚದಲ್ಲಿ ಹಾಸ್ಟೆಲ್ ಅನ್ನು ಆಧುನೀಕರಣ ಮಾಡಲಾಗಿದೆ.
ವಾರ್ಡನ್, ಗ್ರಂಥಾಲಯ, ಕಂಪ್ಯೂಟರ್, ಸೋಲಾರ್ ವ್ಯವಸ್ಥೆ ಇರುವ ಸುಸಜ್ಜಿತ ಕಟ್ಟಡ ಇರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ಪೂರ್ವ ಬಾಲಕಿಯರ ಹಾಸ್ಟೆಲ್ಅನ್ನು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಇಲಾಖೆಗೆ ವರ್ಗಾಯಿಸುವುದು ಸರಿ ಅಲ್ಲ. ಇದರಿಂದ ಅಮಾಯಕ ಪರಿಶಿಷ್ಟ ಜಾತಿ, ವರ್ಗದ ಮಕ್ಕಳಿಗೆ ಅನ್ಯಾಯವಾಗುತ್ತದೆ ಎನ್ನಲಾಗಿದೆ.
ಈಗಾಗಲೇ ಈ ಶೈಕ್ಷಣಿಕ ವರ್ಷದ ಪ್ರವೇಶಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಾಸ್ಟೆಲ್ಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಅರ್ಜಿಗಳನ್ನು ಸ್ವೀಕರಿಸಿ, ದಾಖಲೆ ಮಾಡಿಕೊಳ್ಳಬೇಕು ಎಂಬುದು ವಿದ್ಯಾರ್ಥಿಗಳ ಪೋಷಕರ ಒತ್ತಾಯ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.