ಕೃಷ್ಣರಾಜಪುರ: ಕ್ಯಾಲಸನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 11,14 ಮತ್ತು 15ರಲ್ಲಿ 40 ಎಕರೆ ಸರ್ಕಾರಿ ಜಮೀನಿನಲ್ಲಿ ನಿರ್ಮಾಣಗೊಳ್ಳಲಿರುವ ನಿಮ್ಹಾನ್ಸ್ ಉತ್ತರ ಭಾಗದ ಕ್ಯಾಂಪಸ್ಗೆ ಉಪಮುಖ್ಯಮಂತ್ರಿ ಆರ್.ಅಶೋಕ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, `ಮಾನಸಿಕ ಕಾಯಿಲೆಗಿಂತ ದೊಡ್ಡ ಕಾಯಿಲೆ ಬೇರೊಂದಿಲ್ಲ. ಯುವಕರು, ವಿದ್ಯಾರ್ಥಿಗಳು ಮತ್ತು ನಗರಕ್ಕೆ ಬರುವ ಜನರು ಒತ್ತಡದ ಬದುಕಿಗೆ ಅಂಟಿಕೊಂಡು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಪೋಷಕರ ಮಾರ್ಗದರ್ಶನದಿಂದ ಚಿಕಿತ್ಸೆಗೂ ಮೊದಲೇ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು' ಎಂದರು.
ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ನೂತನ ಕ್ಯಾಂಪಸ್ ದೇಶದ ಪ್ರತಿಷ್ಠಿತ ಎರಡನೇ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ರೂ.250 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಕ್ಯಾಂಪಸ್ನ ಮೊದಲನೆಯ ಹಂತ 2014ಕ್ಕೆ ಪೂರ್ಣಗೊಳ್ಳಲಿದೆ ಎಂದರು. ಶಾಸಕ ಎನ್.ಎಸ್.ನಂದೀಶ ರೆಡ್ಡಿ, ನಿಮ್ಹಾನ್ಸ್ ನಿರ್ದೇಶಕ ಡಾ.ಪಿ.ಸತೀಶ್ಚಂದ್ರ, ವಿಧಾನಪರಿಷತ್ ಸದಸ್ಯ ಬಿ.ಎಸ್.ಸುರೇಶ್, ಕುಲಸಚಿವ ಡಾ.ವಿ.ರವಿ ಇದ್ದರು.