ಬೆಂಗಳೂರು: ತಳಸ್ತರದವರ ಅಭಿವೃದ್ಧಿ ಮತ್ತು ಏಳಿಗೆಗಾಗಿ ದುಡಿದವರನ್ನು ಗುರುತಿಸುವ ಸಲುವಾಗಿ ಸ್ಫೂರ್ತಿಧಾಮ ಸಂಸ್ಥೆಯು ನೀಡುವ ‘ಬೋಧಿವೃಕ್ಷ’ ಪ್ರಶಸ್ತಿಯು ಭಾರತೀಯ ದಲಿತರ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಡಿಐಸಿಸಿಐ) ಅಧ್ಯಕ್ಷ ಮಿಲಿಂದ್ ಕಾಂಬ್ಳೆ ಅವರಿಗೆ ಲಭಿಸಿದೆ.
ಮಹಾರಾಷ್ಟ್ರ ಮೂಲದವರಾದ ಮಿಲಿಂದ್ ಕಾಂಬ್ಳೆ ಅವರು ದಲಿತರಾಗಿದ್ದು, ಸ್ವಂತ ಉದ್ದಿಮೆಯನ್ನು ಸ್ಥಾಪಿಸಿ ದಲಿತರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ದಲಿತರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅವರನ್ನು 2014ರ ‘ಬೋಧಿವೃಕ್ಷ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಫಲಕ ಮತ್ತು ₨ 1 ಲಕ್ಷ ನಗದನ್ನು ಒಳಗೊಂಡಿದೆ.
₨ 25 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುವ ‘ಬೋಧಿವರ್ಧನ’ ಪ್ರಶಸ್ತಿಗೆ ಬುದ್ಧನ ತತ್ವಗಳನ್ನು ಗ್ರಾಫಿಕ್ ಕಲೆಯ ಮೂಲಕ ಪ್ರಸ್ತುತ ಪಡಿಸುತ್ತಿರುವ ಹಿರಿಯ ಕಲಾವಿದ ಡಾ.ಸಿ.ಚಂದ್ರಶೇಖರ್, ಉತ್ತರ ಕನ್ನಡ ಜಿಲ್ಲೆಯ ‘ಕುಣಬಿ’ ಆದಿವಾಸಿಗಳ ಅಭಿವೃದ್ಧಿಗಾಗಿ ಹೋರಾಡುತ್ತಿರುವ ಪ್ರೇಮಾನಂದ ವೆಳಿಪ್, ಅನಾಥ ಮಕ್ಕಳ ಶಿಕ್ಷಣಕ್ಕಾಗಿ ದೀನಬಂಧುಸಂಸ್ಥೆ ನಡೆಸುತ್ತಿರುವ ಜಿ.ಎಸ್.ಜಯದೇವ, ಚಂದ್ರಗುತ್ತಿ ಬೆತ್ತಲೆ ಸೇವೆ ವಿರೋಧಿ ಮತ್ತು ದಲಿತ ಚಳವಳಿ ಮೊದಲಾದ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಾರಾಯಣ ದಾಸ್ ಮತ್ತು ದಲಿತ ಮಹಿಳೆಯರನ್ನು ಕುರಿತು ಬರೆದಿರುವ ಮರಾಠಿ ಲೇಖಕಿ ಊರ್ಮಿಳಾ ಪವಾರ್ ಅವರು ಆಯ್ಕೆಯಾಗಿದ್ದಾರೆ.
ನಗರದ ಮಾಗಡಿ ರಸ್ತೆ ಸಮೀಪದ ಅಂಜನಾನಗರದಲ್ಲಿರುವ ಸ್ಫೂರ್ತಿಧಾಮ ಸಂಸ್ಥೆಯಲ್ಲಿ ಸೋಮವಾರ (ಏ. 14) ನಡೆಯುವ ಅಂಬೇಡ್ಕರ್ ಹಬ್ಬದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.