ಹೊಸಪೇಟೆ: ‘ಹೊಲಿಯ-ಗೊಲರ ಮನೆ ಮಾತು ಈಚಿನ ದಿನಗಳಲ್ಲಿ ಕಣ್ಮರೆ ಯಾಗುತ್ತಿದೆ’ ಎಂದು ಮಧ್ಯಪ್ರದೇಶದ ಬಾಲಾಘಾಟ್ ಕನ್ನಡಗಾಂವ್ನ ಗೊಲರ ಅಲೆಮಾರಿ ಬುಡಕಟ್ಟಿನ ಸಂಪನ್ಮೂಲ ವ್ಯಕ್ತಿ ಭಿವರಾಬಾಯಿ ಗೇಂದಲಾಲ ಗರ್ದೇರ ಆತಂಕ ವ್ಯಕ್ತಪಡಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗ, ಕನ್ನಡ ಭಾಷಾಧ್ಯಯನ ವಿಭಾಗ ಮತ್ತು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಹೊಲಿಯ-ಗೊಲರ (ಕನ್ನಡ) ಭಾಷೆ’ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ತಲೆಮಾರಿನ ಜನ ಸಾಮಾನ್ಯರು ಹೊಲಿಯ ಗೊಲರ ಕನ್ನಡ ಬದಲಾಗಿ ಹಿಂದಿ ಭಾಷೆಯಲ್ಲಿಯೇ ವ್ಯವಹರಿಸುತ್ತಿರುವುದು ಭಾಷೆಗೆ ಹಿನ್ನೆಡೆಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಭಾಷೆಯ ಉಳಿವಿವಾಗಿ ಚಿಂತಿಸಲು ಕಾರ್ಯಕ್ರಮ ಆಯೋಜನೆ ಶ್ಲಾಘನೀಯ ಎಂದರು.
ಹಿರಿಯ ಭಾಷಾ ತಜ್ಞ ಡಾ.ಕೆ. ಕೇಪೇಗೌಡ ಮಾತನಾಡಿ, ಮಧ್ಯ ಪ್ರದೇಶದ ಬಾಲಘಾಟ್, ಶಿವನಿ ಜಿಲ್ಲೆಗಳ ಲ್ಲಿಯ ಹೊಲಿಯ ಮತ್ತು ಗೊಲರ ಸಮು ದಾಯಗಳು ವಾಸವಾಗಿದ್ದ ನೆಲೆಗಳಲ್ಲಿ ಕೈಗೊಂಡ ಕ್ಷೇತ್ರಕಾರ್ಯದ ಅನುಭವಗಳನ್ನು ಹಂಚಿಕೊಂಡರು.
ಹೊಲಿಯ-ಗೊಲರ (ಕನ್ನಡ) ಭಾಷೆ, ಕನ್ನಡ ಭಾಷೆಯ ಒಂದು ರೂಪ ಆಗಿದ್ದು ಇದು ಅಳಿವಿನಂಚಿನಲ್ಲಿದೆ. ಇವರ ಭಾಷೆ ಉತ್ತರ ಕರ್ನಾಟಕದ ಭಾಷೆಗೆ ಹೆಚ್ಚು ಹೋಲಿಕೆಯಾಗುತ್ತದೆ. ಈ ಭಾಷೆ ಮತ್ತು ಜನಸಂಸ್ಕೃತಿಯ ಮೂಲ ಮತ್ತು ಪ್ರಸಾರ ವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ತಜ್ಞರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕವಿವಿ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಎಂ.ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ‘ಭಾರತದ ಜನಗಣತಿ ಅಂಕಿಅಂಶಗಳ ಪ್ರಕಾರ ಸಹ ಸ್ರಾರು ಬುಡಕಟ್ಟು ಮೂಲ ನುಡಿಗಳು, ಭಾಷೆಗಳು ಅಳಿವಿನಂಚಿ ನಲ್ಲಿವೆ’ ಎಂದು ತಿಳಿದುಬಂದಿದೆ ಎಂದರು.
ವಿಚಾರ ಸಂಕಿರಣದಲ್ಲಿ ಮಧ್ಯಪ್ರದೇಶದ ಹೊಲಿಯ ಮತ್ತು ಗೊಲರ ಸಮುದಾಯದ ತಲಾ ಹತ್ತು ಹಾಗೂ ಗೊಂಡ ಬುಡಕಟ್ಟಿನ ಮೂವರು ಭಾಷಿಕ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಭಾದುಲಾಲ ಗಡೇರ, ಬಿಸನ್ಸಿಂಗ್ ಪರತೇತಿ ಮಾತನಾಡಿದರು. ಕುಲಸಚಿವ ಡಾ.ಡಿ. ಪಾಂಡುರಂಗಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಭಾಷಾ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಪಿ. ಮಹದೇವಯ್ಯ ಸ್ವಾಗತಿಸಿದರು, ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥ ಡಾ ಚಲುವರಾಜು ವಂದಿಸಿದರು, ಡಾ.ಮಲ್ಲಿಕಾರ್ಜುನ ಬಿ ಮಾನ್ಪಡೆ ನಿರೂಪಿಸಿದರು.
ಬುಡಕಟ್ಟು ಸಮುದಾಯಗಳ ಅನನ್ಯತೆಗಳಲ್ಲಿ ಭಾಷೆ ಪ್ರಧಾನವಾದುದು. ಈ ನುಡಿಗಳು ಮರೆತುಹೋದರೆ ಬುಡಕಟ್ಟುಗಳ ಅಮೂಲ್ಯ ಪಾರಂಪರಿಕ ಜ್ಞಾನವೂ ಮರೆಯಾಗುತ್ತದೆ
- ಡಾ. ಕೆ.ಎಂ. ಮೇತ್ರಿ,
ಕಾರ್ಯಾಗಾರದ ಸಂಚಾಲಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.