ಬೆಂಗಳೂರು: ಮೈಸೂರು ಸೇರಿದಂತೆ ರಾಜ್ಯದ ಇತರ 10 ನಗರ-ಪಟ್ಟಣಗಳಲ್ಲಿ ಬೆಂಗಳೂರಿನ ಜವಾಹರಲಾಲ್ ನೆಹರೂ ತಾರಾಲಯ ಮಾದರಿಯಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರಗಳು ಶೀಘ್ರದಲ್ಲಿ ತಲೆ ಎತ್ತಲಿವೆ.
ಇಲ್ಲಿನ ಭಾರತೀಯ ವಿದ್ಯಾಭವನದಲ್ಲಿ `ಬೆಂಗಳೂರು ವಿಜ್ಞಾನ ಶಿಕ್ಷಣ ಸಂಘ~ ಮತ್ತು ಜವಾಹರಲಾಲ್ ನೆಹರೂ ತಾರಾಲಯ ಜಂಟಿಯಾಗಿ ಗುರುವಾರ ಆಯೋಜಿಸಿದ್ದ `ಗ್ಯಾಲಕ್ಸಿ ಫೋರಂ ಇಂಡಿಯಾ 2011~ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್ ಈ ವಿಷಯ ತಿಳಿಸಿದರು.
ಧಾರವಾಡದಲ್ಲಿ ನಿರ್ಮಾಣವಾಗುತ್ತಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರ ಇದೇ ನವೆಂಬರ್ 4ರಂದು ಉದ್ಘಾಟನೆಗೊಳ್ಳಲಿದೆ. ಮಂಗಳೂರಿನ ಪಿಲಿಕುಳದಲ್ಲಿ ನಿರ್ಮಾಣವಾಗುತ್ತಿರುವ ಇದೇ ಮಾದರಿಯ ಕೇಂದ್ರ 2012ರ ಫೆಬ್ರವರಿಯಲ್ಲಿ ಉದ್ಘಾಟನೆಯಾಗಲಿದೆ. ಈ ಕೇಂದ್ರಗಳನ್ನು ಬೆಂಗಳೂರಿನ ಜವಾಹರಲಾಲ್ ನೆಹರೂ ತಾರಾಲಯದ ಮಾದರಿಯಲ್ಲೇ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಇಂಧನ ಸ್ವಾವಲಂಬನೆ ಮತ್ತು ಖಗೋಳ ವಿಜ್ಞಾನದ ಬಗ್ಗೆ ಮಾತನಾಡಿದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಾಜಿ ಅಧ್ಯಕ್ಷ ಪ್ರೊ.ಯು. ಆರ್. ರಾವ್ ಖಗೋಳ ವಿಜ್ಞಾನ ಮತ್ತು ಭಾರತದಲ್ಲಿ ಅದರ ಬೆಳವಣಿಗೆ ಕುರಿತು ವಿವರಿಸಿದರು.
ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್, ಜವಾಹರಲಾಲ್ ನೆಹರೂ ತಾರಾಲಯದ ನಿರ್ದೇಶಕ ಪ್ರೊ.ಸಿ.ಎಸ್. ಶುಕ್ರೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.