ಕೋಲಾರ: ಬಸವ ವಸತಿ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿದ ಪರಿಣಾಮವಾಗಿ ಜಿಲ್ಲೆಯಲ್ಲಿ 13 ಸಾವಿರ ಮನೆಗಳ ಅನುದಾನವನ್ನು ಸರ್ಕಾರ ವಾಪಸ್ ಪಡೆದಿದೆ. ಹೀಗಿದ್ದರೂ ಯೋಜನೆಯ ಅನುಷ್ಠಾನದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗಂಭೀರವಾಗಿ ತೊಡಗಿಸಿಕೊಂಡಿಲ್ಲ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.ಜುಲ್ಫಿಕಾರ್ ಉಲ್ಲಾ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆಯಲ್ಲಿ ಜಿಲ್ಲೆಗೆ 40 ಸಾವಿರ ಮನೆಗಳು ಮಂಜೂರಾಗಿದ್ದವು. ಅವುಗಳ ಪೈಕಿ 34 ಸಾವಿರ ಮನೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿತ್ತು. ನಂತರದ 3 ತಿಂಗಳಲ್ಲಿ ಮನೆ ಕಟ್ಟುವ ಪ್ರಕ್ರಿಯೆ ಶುರುವಾಗಲಿಲ್ಲ. ಗಡುವನ್ನು ನಂತರ 6 ತಿಂಗಳು ವಿಸ್ತರಿಸಿದರೂ ನಿರ್ಮಾಣ ಕಾರ್ಯ ಶುರುವಾಗದ ಹಿನ್ನೆಲೆಯಲ್ಲಿ ಸರ್ಕಾರ 13 ಸಾವಿರ ಮನೆಗಳ ಅನುದಾನವನ್ನು ವಾಪಸು ಪಡೆಯಿತು ಎಂದು ವಿವರಿಸಿದರು.
ಇದೀಗ ಇಂದಿರಾ ಆವಾಸ್ ಯೋಜನೆಯ ಅಡಿ ಮನೆಗಳನ್ನು ನಿರ್ಮಿಸುವ ಕಾರ್ಯದಲ್ಲೂ ಅಭಿವೃದ್ಧಿ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ. ಯೋಜನೆಯಡಿ ಚೆಕ್ಗಳನ್ನು ವಿತರಿಸಲಾಗಿದ್ದರೂ, ಆ ಬಗ್ಗೆ ಆನ್ಲೈನ್ ನಲ್ಲಿ ಮಾಹಿತಿಯನ್ನು ಸಮರ್ಪಕವಾಗಿ ದಾಖಲಿಸುತ್ತಿಲ್ಲ. ಮನೆ ನಿರ್ಮಾಣವಾಗದಿದ್ದರೂ ಹಣ ಮಂಜೂರು ಮಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ವಸತಿ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆಯ ಇತರೆ ತಾಲ್ಲೂಕುಗಳಿಗಿಂತಲೂ ಶ್ರೀನಿವಾಸಪುರ ಬಹಳ ಹಿಂದೆ ಉಳಿದಿದೆ. ಇಂದಿರಾ ಆವಾಸ್ ಯೋಜನೆಯಲ್ಲಿ ಶೇ 70 ಮತ್ತು ಬಸವ ವಸತಿ ಯೋಜನೆಯಲ್ಲಿ ಶೇ 35ರಷ್ಟು ಮಾತ್ರ ಪ್ರಗತಿಯಾಗಿದೆ. ಆದರೂ ಗ್ರಾಮ ಸಭೆಯನ್ನು ಸರಿಯಾದ ರೀತಿಯಲ್ಲಿ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರೆ ತಮ್ಮ ಆಕ್ಷೇಪವಿರುವುದಿಲ್ಲ ಎಂದು ಶಾಸಕ ಕೆ.ಆರ್.ರಮೇಶ್ಕುಮಾರ್ ಹೇಳಿದ್ದಾರೆ. ಫಲಾನುಭವಿಗಳ ಪಟ್ಟಿಯನ್ನು ಅಂತಿಮವಾಗಿ ಸಿದ್ಧಪಡಿಸಲು ಜ,10ರವರೆಗೆ ಗಡುವು ನೀಡಲಾಗಿದೆ. ಅಂದು ನಡೆಯುವ ಸಭೆಗೆ ಗ್ರಾಮ ಸಭೆಗಳನ್ನು ನಡೆಸಿದ ದಾಖಲೆಗಳೊಂದಿಗೆ ಹಾಜರಾಗಬೇಕು ಎಂದು ಅವರು ಸೂಚಿಸಿದರು.
ವಸತಿ ಯೋಜನೆಗಳ ಪ್ರಗತಿ ಕಡಿಮೆ ಇದ್ದರೂ ಹೆಚ್ಚಾಗಿದೆ ಎಂದು ಆನ್ಲೈನ್ ನಲ್ಲಿ ನಮೂದಿಸುವುದರಿಂದ ಫಲಾನುಭವಿಗಳಿಗೆ ತೊಂದರೆಯಾಗುತ್ತದೆ. ಅನುದಾನ ವಾಪಸು ಹೋಗುತ್ತದೆ ಎಂಬ ಕಾರಣದಿಂದ ಇಲ್ಲದ ಪ್ರಗತಿಯನ್ನು ದಾಖಲಿಸುವುದು ಬೇಡ. ಹಾಗೆ ಮಾಡಿದರೆ ಅಭಿವೃದ್ಧಿ ಅಧಿಕಾರಿ ಮತ್ತು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
1.70 ಕೋಟಿ ವ್ಯತ್ಯಾಸ: ಮಾಲೂರು ತಾಲ್ಲೂಕಿನಲ್ಲಿ ಪಡೆದ ಅನುದಾನಕ್ಕೂ ಮತ್ತು ಖರ್ಚಾಗಿರುವುದಕ್ಕೂ ₨ 1.70 ಕೋಟಿ ವ್ಯತ್ಯಾಸ ಕಂಡುಬಂದಿದೆ. ರಾಜಕಾರಣಿಗಳು ಒತ್ತಡ ಹೇರುತ್ತಾರೆ ಎಂಬ ಕಾರಣಕ್ಕೆ ನಿಂತಿದ್ದ ಸ್ಥಳದಲ್ಲೇ ಚೆಕ್ಗಳಿಗೆ ಸಹಿ ಮಾಡಿ ನೀಡುವ ಪ್ರವೃತ್ತಿಯನ್ನು ಕೈ ಬಿಡಬೇಕು. ಒತ್ತಡವನ್ನು ನಿರ್ವಹಣೆ ಮಾಡಿ ಸರಿಯಾದ ರೀತಿ ಕೆಲಸ ಮಾಡಬೇಕು. ಇಲ್ಲವಾದರೆ ವ್ಯತ್ಯಾಸದ ಮೊತ್ತವನ್ನು ದಾಖಲೀಕರಣ ಮಾಡಲು ತೊಂದರೆ ಉಂಟಾಗುತ್ತದೆ ಎಂದು ಹೇಳಿದರು.
ತರಾಟೆ: ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿಯ ಕರಡುಪಟ್ಟಿ ಪ್ರಕಟಣೆಯ ಬಳಿಕ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಲು ಏರ್ಪಡಿಸಿದ್ದ ಸಭೆಯಲ್ಲಿ ಹಾಜರಿದ್ದವರಿಗೆ ಪೂರಕ ಸಾಮಗ್ರಿ ನೀಡದಿರುವ ಹಿನ್ನೆಲೆಯಲ್ಲಿ ಮುಖ್ಯ ಯೋಜನಾಧಿಕಾರಿ ಆರೋಕ್ಯ ಸ್ವಾಮಿಯವರನ್ನು ಜುಲ್ಫಿಕಾರ್ ಉಲ್ಲಾ ತೀವ್ರ ತರಾಟೆಗೆ ತೆಗೆದುಕೊಂಡರು.
ಮಾಹಿತಿ ನೀಡಲು ದ್ವಿತೀಯ ದರ್ಜೆಯ ಗುಮಾಸ್ತರನ್ನು ನಿಯೋಜಿಸಿ ತಾವು ಸುಮ್ಮನಿದ್ದರೆ ಹೇಗೆ ಎಂದು ಅವರು ಆರೋಕ್ಯಸ್ವಾಮಿಯವರನ್ನು ಪ್ರಶ್ನಿಸಿದರು. ಪವರ್ ಪಾಯಿಂಟ್ ಪ್ರದರ್ಶನದ ಮೂಲಕ ವಿವರಣೆ ನೀಡುವ ಬದಲಿಗೆ ಮಾಹಿತಿ ಪತ್ರಗಳನ್ನೂ ನೀಡದೆ ಹಳೆಯ ಕಾಲದ ಪದ್ಧತಿಯಂತೆ ಸುಮ್ಮನೆ ನಿಂತು ಭಾಷಣ ಮಾಡಿದರೆ ಏನೂ ಪ್ರಯೋಜನವಾಗುವುದಿಲ್ಲ ಎಂದು ಮುಖ್ಯ ತರಬೇತುದಾರ ನಾರಾಯಣಾಚಾರ್ ಅವರನ್ನೂ ತರಾಟೆಗೆ ತೆಗೆದುಕೊಂಡರು. ಪೂರಕ ಸಾಮಗ್ರಿಗಳನ್ನು ಜೆರಾಕ್ಸ್ ಮಾಡಿ ತರಲು ಈ ಸಿಬ್ಬಂದಿ ಹೊರನಡೆದಾಗ ಸಮಯ ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ವಸತಿ ಯೋಜನೆ ಮತ್ತು ಉದ್ಯೋಗಖಾತ್ರಿ ಯೋಜನೆ ಜಾರಿ ಪ್ರಗತಿ ಕುರಿತು ಸಭೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.