ರಾಯಚೂರು: 32ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಇದೇ 21ರಂದು ಧಾರವಾಡದ ಕಡಪಾ ಮೈದಾನದಲ್ಲಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಬುಧವಾರ ಇಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸುವುದು, ರೈತ ಚಳುವಳಿಯ ಮುಂದಿನ ಹೋರಾಟವನ್ನು ಘೋಷಣೆ ಮಾಡುವುದು ಈ ಸಮಾವೇಶದ ಪ್ರಮುಖ ಉದ್ದೇಶಗಳಾಗಿವೆ ಎಂದರು.
ಧಾರವಾಡ ಜಿಲ್ಲೆಯ ನರಗುಂದ-ನವಲಗುಂದದಲ್ಲಿ ರೈತ ಬಂಡಾಯ ನಡೆದು 32 ವರ್ಷಗಳಾಗಿವೆ. ಈ ಚಾರಿತ್ರಿಕ ಬಂಡಾಯದಲ್ಲಿ ಅಂದಿನ ಆಳುವ ಸರ್ಕಾರದ ಗುಂಡಿಗೆ ಬಲಿಯಾಗಿ ಹುತಾತ್ಮರಾದವರ ಸ್ಮರಣಾರ್ಥ ಸಂಘಟನೆಯು ಜುಲೈ 21 ಅನ್ನು `ರೈತ ಹುತಾತ್ಮ ದಿನ~ವನ್ನಾಗಿ ಆಚರಿಸುತ್ತಿದೆ ಎಂದು ಹೇಳಿದರು.