ಉಡುಪಿ: ಮಣಿಪಾಲ, ಉಡುಪಿಯ ರಾಜಾಂಗಣ, ಸಿಟಿ ಬಸ್ ನಿಲ್ದಾಣ, ಬ್ರಹ್ಮಾವರದಲ್ಲಿ ಗುರುವಾರ ಕಾರ್ಯಾಚರಣೆ ನಡೆಸಿದ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಭಿಕ್ಷಾಟನೆಯಲ್ಲಿ ತೊಡಗಿದ್ದ 24 ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸಿ ಪುರ್ವಸತಿ ಕೇಂದ್ರಕ್ಕೆ ಕಳುಹಿಸಿದರು.
ಐವರು ಮಹಿಳೆಯರು, ಎಂಟು ಮಂದಿ ಮಕ್ಕಳು, ಹನ್ನೊಂದು ಹುಡುಗಿಯರು ಇದ್ದಾರೆ. ಇವರೆಲ್ಲರನ್ನು ಮಕ್ಕಳ ಕಲ್ಯಾಣ ಸಮಿತಿಗೆ ಕಳುಹಿಸಲಾಗುತ್ತದೆ. ಅಲ್ಲಿಂದ ವಿವಿಧ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮಕ್ಕಳ ರಕ್ಷಣಾ ಘಟಕದ ಕಿರಣ್ ಬಾಬು, ನೇಟಿವ್ ಆರ್ಗನೈಸೇಷನ್ನ ಪ್ರೇಮಾನಂದ ಕಲ್ಮಾಡಿ, ಬಾಲ ಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಪ್ರಭಾಕರ ಆಚಾರ್ಯ, ಸ್ಫೂರ್ತಿಧಾಮದ ಕೇಶವ ಕೋಟೇಶ್ವರ, ಮಕ್ಕಳ ಕಲ್ಯಾಣ ಇಲಾಖೆ, ಮಣಿಪಾಲದ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು, ಮಣಿಪಾಲ ಮತ್ತು ಬ್ರಹ್ಮಾವರ ಠಾಣೆಯ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಉಡುಪಿಯಲ್ಲಿ ಬಾಲ ಭಿಕ್ಷುಕರ ಪುನರ್ವಸತಿ ಕೇಂದ್ರ ಇಲ್ಲದಿರುವ ಕಾರಣ, ಮಕ್ಕಳನ್ನು ಮಂಗಳೂರಿನ ಕೇಂದ್ರಕ್ಕೆ ಕಳುಹಿಸಬೇಕಾಗಿದೆ. ಜಿಲ್ಲೆಯಲ್ಲಿಯೇ ಕೇಂದ್ರ ಆರಂಭವಾದರೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.