ದಾವಣಗೆರೆ: ವಿಶ್ವ ಹಿಂದೂ ಪರಿಷತ್, ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಆಶ್ರಯದಲ್ಲಿ ಅ. 24ರಂದು ವಿಜಯದಶಮಿ ಮಹೋತ್ಸವ ನಡೆಯಲಿದೆ.
ಪೂರ್ವಭಾವಿಯಾಗಿ ನವರಾತ್ರಿ ಆರಂಭದ ಹಿನ್ನೆಲೆಯಲ್ಲಿ ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ದೇವಿ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ. ನವರಾತ್ರಿಯ 9 ದಿನಗಳ ಕಾಲ ದೇವರಿಗೆ ವಿಶೇಷ ಪೂಜೆ, ಪ್ರತಿದಿನ ಸಂಜೆ 6.30ರಿಂದ 8ರವರೆಗೆ ಟಿ. ವಿರೂಪಾಕ್ಷಪ್ಪ ಮತ್ತು ಸಂಗಡಿಗರಿಂದ ದೇವಿ ಪುರಾಣ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಕೆ.ಎಸ್. ಶಿವಲಿಂಗಪ್ಪ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
24ರಂದು ಬೆಳಿಗ್ಗೆ 11ರಿಂದ ನಗರದ ವೆಂಕಟೇಶ್ವರ ವೃತ್ತದಿಂದ ಶೋಭಾಯಾತ್ರೆ ನಡೆಯಲಿದೆ. ಮೆರವಣಿಗೆಯಲ್ಲಿ ಅನೇಕ ಕಲಾ ತಂಡಗಳು ಭಾಗವಹಿಸಲಿವೆ. ಅಂದು ಸಂಜೆ 6.15ರಿಂದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ. ಆವರಗೊಳ್ಳ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ.
ಎಸ್. ಗುರುಪಾದಪ್ಪ ಶಾಸ್ತ್ರಿ ಅವರಿಂದ ಪ್ರವಚನ ನಡೆಯಲಿದೆ. ಸಚಿವರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ, ಮೇಯರ್ ಸುಧಾ ಜಯರುದ್ರೇಶ್, ಶಾಸಕರಾದ ಶಾಮನೂರು ಶಿವಶಂಕರಪ್ಪ ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಅಂಬುಛೇದನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ವಿಹಿಂಪ ಮುಖಂಡ ಕೆ.ಬಿ. ಶಂಕರನಾರಾಯಣ ಮಾತನಾಡಿ, ಈ ಬಾರಿಯ ಮೆರವಣಿಗೆ ಪಾನಮುಕ್ತವಾಗಿರಬೇಕು. ಯುವಕರು ಮದ್ಯಪಾನ ಮಾಡದೆ ಮೆರವಣಿಗೆಯಲ್ಲಿ ಭಾಗವಹಿಸಬೇಕು. ಇನ್ನೊಂದು ಸಮುದಾಯ, ದೇವರನ್ನು ಅವಹೇಳನ ಮಾಡುವ ಘೋಷಣೆ ಕೂಗಬಾರದು. ಎಲ್ಲ ಸಮುದಾಯದವರೂ ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಆಟೋ, ಬೈಕ್ ರ್ಯಾಲಿ
ಮೆರವಣಿಗೆ ಪೂರ್ವಭಾವಿಯಾಗಿ ಜಾಗೃತಿ ಮೂಡಿಸಲು ಅ. 21ರಂದು ಬೆಳಿಗ್ಗೆ 11ಕ್ಕೆ ನಗರದಲ್ಲಿ ಆಟೋರ್ಯಾಲಿ ನಡೆಯಲಿದೆ. 22ರಂದು ಬೆಳಿಗ್ಗೆ 10ಕ್ಕೆ ಬೈಕ್ ರ್ಯಾಲಿ ನಡೆಯಲಿದೆ ಎಂದರು.
ಸಮಿತಿ ಸಂಚಾಲಕ ಎನ್.ಎಚ್. ಶಿವಕುಮಾರ್, ವೈ. ಮಲ್ಲೇಶ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.