ದಾವಣಗೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ 9 ಸಂಘಟನೆಗಳು ದೇಶವ್ಯಾಪಿ ಫೆ. 28ರಂದು ಮುಷ್ಕರ ಕೈಗೊಂಡಿದ್ದು, ಅಂದು ದಾವಣಗೆರೆಯಲ್ಲೂ ಮುಷ್ಕರ ನಡೆಯಲಿದೆ.
ದುಡಿಯುವ ವರ್ಗದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಈ ಮುಷ್ಕರ ಹಮ್ಮಿಕೊಂಡಿದ್ದು, ಸರ್ಕಾರ ನೀತಿಯನ್ನು ಖಂಡಿಸಲಾಗುವುದು. ಅಂದು ಬೆಳಿಗ್ಗೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.
ರಾಷ್ಟ್ರದಲ್ಲಿ ಶೇ. 28ರಷ್ಟು ಮಂದಿ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಾರೆ. ಈ ಮಾಹಿತಿಯನ್ನು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಅಲ್ಲಿನ ಜನರಿಗೆ ಸ್ವಚ್ಛಪರಿಸರ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಇತರ ಯಾವುದೇ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.
ಅನೇಕ ರೋಗ-ರುಜಿನಗಳಿಂದ ನರಳುವಂತೆ ಆಗಿದೆ. ಅಲ್ಲಿಗೆ ಕನಿಷ್ಠ ಪ್ರಾಥಮಿಕ ಸೌಲಭ್ಯ ಕಲ್ಪಿಸಿ ಎಂದರೂ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ದೂರಿದರು. ಕಾರ್ಮಿಕ ಸಂಘಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಮುಷ್ಕರ ನಡೆಯುತ್ತಿದ್ದು, ವಿವಿಧ ಸಂಘಟನೆಗಳು ಪಾಲ್ಗೊಳ್ಳಲಿವೆ.
ಪತ್ರಿಕಾಗೋಷ್ಠಿಯಲ್ಲಿ ಕೆ.ಎಲ್. ಭಟ್, ಷಣ್ಮುಖಪ್ಪ, ಅಜಿತ್ಕುಮಾರ್, ಜಮೀರ್ ಅಹ್ಮದ್ ಬಳ್ಳಾರಿ, ತಿಪ್ಪೇಸ್ವಾಮಿ, ಆವರಗೆರೆ ಚಂದ್ರು, ಆನಂದ್ರಾಜ್, ಉಮೇಶ್, ಆವರಗೆರೆ ವಾಸು ಹಾಜರಿದ್ದರು.