ನವದೆಹಲಿ (ಪಿಟಿಐ): ಸಿಎಜಿ ವರದಿಯೊಂದನ್ನೇ ಆಧರಿಸಿ 2ಜಿ ತರಾಂಗತರ ಹಂಚಿಕೆಯ ಪರವಾನಗಿಯನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
‘ತರಂಗಾಂತರ ಹಂಚಿಕೆ ರದ್ದತಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ತೆಗೆದುಕೊಳ್ಳಬೇಕಾದರೂ ಸರ್ಕಾರ ಸುಪ್ರೀಂಕೋರ್ಟ್ನಲ್ಲಿರುವ ಅರ್ಜಿ ಇತ್ಯರ್ಥವಾಗುವವರೆಗೂ ಕಾಯಲೇಬೇಕು’ ಎಂದು ನ್ಯಾಯಮೂರ್ತಿ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಅವರನ್ನು ಒಳಗೊಂಡ ನ್ಯಾಯ ಪೀಠವು ತಿಳಿಸಿದೆ.
‘ಈಗ ಸರ್ಕಾರ ಈ ವಿಚಾರವಾಗಿ ಏನು ಮಾಡುತ್ತಿದೆ ಎಂಬುದು ನಮಗೆ ಗೊತ್ತಿಲ್ಲ. ಆದರೆ ಕ್ರಮ ಜರುಗಿಸಬೇಕಾದರೆ ಕೋರ್ಟ್ ತೀರ್ಪಿಗೆ ಕಾಯಲೇಬೇಕು’ ಎಂದು ತಿಳಿಸಿದೆ.
ಅರ್ಹತೆ ಇಲ್ಲದ ಕಂಪೆನಿಗಳಿಗೆ ನೀಡಲಾಗಿರುವ ಪರವಾನಗಿಯನ್ನು ಕ್ರಮಬದ್ಧಗೊಳಿಸದಂತೆ ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ಮಾಡಿರುವ ಮನವಿಗೆ ನ್ಯಾಯಪೀಠ ಮೇಲಿನಂತೆ ಪ್ರತಿಕ್ರಿಯಿಸಿದೆ. ಅರ್ಹತೆ ಇಲ್ಲದ ಕಂಪೆನಿಗಳಿಗೆ ನೀಡಲಾಗಿರುವ ಪರವಾನಗಿಯನ್ನು ದಂಡ ವಿಧಿಸುವ ಮೂಲಕ ಕ್ರಮಬದ್ಧಗೊಳಿಸುವ ಯತ್ನ ನಡೆದಿದೆ ಎಂದು ಸಿಪಿಐಎಲ್ ಪರ ವಕೀಲ ಪ್ರಶಾಂತ್ ಭೂಷಣ್ ಅವರು ನ್ಯಾಯಪೀಠದ ಗಮನಕ್ಕೆ ತಂದರು.
ಒಮ್ಮೆ ಸರ್ಕಾರ ಪರವಾನಗಿಯನ್ನು ರದ್ದುಪಡಿಸಬೇಕು ಎಂದು ನಿರ್ಧರಿಸಿದ್ದರೆ ಸಿಎಜಿ ವರದಿಯೊಂದನ್ನೇ ಆಧರಿಸಿ ಆ ರೀತಿ ಮಾಡಲು ಸಾಧ್ಯವಿಲ್ಲ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸಿಪಿಐಎಲ್ ಸಂಘಟನೆಯಲ್ಲದೆ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಸಹ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, 2ಜಿ ತರಂಗಾಂತರ ಹಂಚಿಕೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ದೂರಿದ್ದಾರೆ. ಈ ಅರ್ಜಿಯನ್ನೂ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ. ಮುಂದಿನ ವಿಚಾರಣೆಯನ್ನು ಮಾರ್ಚ್ 1ಕ್ಕೆ ಮುಂದೂಡಲಾಗಿದೆ.