ಬೆಂಗಳೂರು: ನಗರದ ವಿವಿಧ ಭಾಗಗಳ ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಮೂರು ತಿಂಗಳಿಂದ ವೇತನ ದೊರಕಿಲ್ಲ ಎಂಬ ದೂರು ಕೇಳಿಬಂದಿದೆ.
ನಗರದ ದಕ್ಷಿಣ ವಿಭಾಗದ ಶಿಕ್ಷಕರು ಬಗ್ಗೆ `ಪ್ರಜಾವಾಣಿ'ಗೆ ಕರೆ ಮಾಡಿ, ಕಳೆದ ಮೂರು ತಿಂಗಳಿಂದ ವೇತನವನ್ನು ನೀಡುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
`ವೇತನ ದೊರಕದೆ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ನಮ್ಮ ಮನವಿಗೆ ಹಿರಿಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ' ಎಂದು ಹೆಸರು ಹೇಳಲಿಚ್ಚಿಸದ ಶಿಕ್ಷಕರೊಬ್ಬರು ಹೇಳಿದರು.
ಈ ಬಗ್ಗೆ `ಪ್ರಜಾವಾಣಿ' ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಎಸ್.ಆರ್.ಉಮಾಶಂಕರ್ ಅವರನ್ನು ಸಂಪರ್ಕಿಸಿದಾಗ, `ಸರ್ವ ಶಿಕ್ಷಣ ಅಭಿಯಾನದಿಂದ ಹಣ ಬಿಡುಗಡೆ ಮಾಡುವಲ್ಲಿ ಸಮಸ್ಯೆ ಉಂಟಾಗಿದ್ದರಿಂದ ಕಳೆದ ವರ್ಷ ವೇತನ ನೀಡುವಲ್ಲಿ ವಿಳಂಬವಾಗಿತ್ತು. ಆದರೆ, ಡಿಸೆಂಬರ್ ನಂತರ ಸಮರ್ಪಕವಾಗಿ ವೇತನ ನೀಡಲಾಗುತ್ತಿದೆ. ನಗರದ ದಕ್ಷಿಣ ವಿಭಾಗದಲ್ಲಿ ವೇತನ ಬಿಡುಗಡೆಯ ತೊಂದರೆಗಳಿದ್ದಲ್ಲಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು' ಎಂದರು.