ಪಿರಿಯಾಪಟ್ಟಣ: ಪಟ್ಟಣದ ಆರ್ಎಂಸಿ ಬಳಿ ಇರುವ ಕುಂಬಾರಕಟ್ಟೆ ಕರೆಯಲ್ಲಿ ಈಜಲು ತೆರಳಿದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಜರುಗಿದೆ.
ಪಟ್ಟಣದ ಒಳಕೋಟೆ ನಿವಾಸಿ ಕೃಷ್ಣ ಅವರ ಮಕ್ಕಳಾದ ಮನೋಜ್ (15) ಮತ್ತು ಸಂಜು (14) ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಪಿ.ಮಹದೇವ್ ಪುತ್ರ ಶಶಿಕುಮಾರ್ (15) ಮೃತಪಟ್ಟ ದುರ್ದೈವಿಗಳು. ಬಾಲಕರೊಂದಿಗೆ ತೆರಳಿದ್ದ ಮನೋಜ್ ಎಂಬಾತ ಈಜಿ ದಡ ಸೇರಿ ಪಾರಾಗಿದ್ದಾನೆ.
ಮಧ್ಯವಾರ್ಷಿಕ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಸಂಜೆ 4.30ರ ಸಮಯದಲ್ಲಿ ಈಜಲು ತೆರಳಿದ್ದಾರೆ. ಮನೋಜ್ ಮತ್ತು ಸಂಜು ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಕ್ರಮವಾಗಿ 10 ಮತ್ತು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶಶಿಕುಮಾರ್ ಪಟ್ಟಣದ ವಿದ್ಯಾವಿಕಾಸ ಖಾಸಗಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಠಾಣಾಧಿಕಾರಿ ಎಂ.ಪಿ.ಸಿದ್ದೇಗೌಡ ನೇತೃತ್ವದಲ್ಲಿ ಶವಗಳನ್ನು ಹೊರತೆಗೆದರು.