ನವದೆಹಲಿ (ಪಿಟಿಐ): ದೇಶಾದ್ಯಂತ ಎಚ್ಐವಿ ತಿಳಿವಳಿಕೆಗಾಗಿ ಆರಂಭಿಸಲಾದ ಮೊದಲ ಎರಡು ಹಂತದ ರೆಡ್ ರಿಬ್ಬನ್ ಎಕ್ಸ್ಪ್ರೆಸ್ ರೈಲು ಭಾರಿ ಯಶಸ್ಸು ಕಂಡಿದ್ದರಿಂದ ಕೇಂದ್ರ ಸರ್ಕಾರ ಗುರುವಾರ ಮೂರನೇ ಹಂತದ ರೈಲಿಗೆ ಹಸಿರು ನಿಶಾನೆ ನೀಡಿದೆ.
ರೈಲ್ವೆ ಸಚಿವಾಲಯ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (ಎನ್ಆರ್ಎಚ್ಎಂ), ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ (ಎನ್ಎಸಿಒ)ದ ಸಹಯೋಗದಲ್ಲಿ 2007ರಲ್ಲಿ ಮೊದಲ ಬಾರಿಗೆ ರೆಡ್ ರಿಬ್ಬನ್ ಎಕ್ಸ್ಪ್ರೆಸ್ ಆರಂಭಿಸಲಾಗಿದೆ. ಆರಂಭದ ಹಂತದಲ್ಲಿ ಈ ರೈಲು 14 ದಶಲಕ್ಷ ಜನರನ್ನು ತಲುಪಿದೆ.
ರಾಷ್ಟ್ರೀಯ ಯುವ ದಿನಾಚರಣೆಅಂಗವಾಗಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ರೆಡ್ ರಿಬ್ಬನ್ ರೈಲಿಗೆ ಹಸಿರು ನಿಶಾನೆ ನೀಡಿದರು. ಏಡ್ಸ್ ಪೀಡಿತರಿಗೆ ಈ ರೈಲು ಸಹಕಾರಿಯಾಗಲಿದ್ದು, ಇದರ ವಿರುದ್ಧ ಹೋರಾಡುವ ಮತ್ತು ತಿಳಿವಳಿಕೆ ನೀಡಲಿದೆ ಎಂದು ಹೇಳಿದರು.
ಕೇಂದ್ರ ಆರೋಗ್ಯ ಸಚಿವ ಗುಲಾಮ ನಬಿ ಆಜಾದ್ ಮಾತನಾಡಿ, ಏಡ್ಸ್ ವಿರುದ್ಧ ಕೈಗೊಂಡಿರುವ ಕ್ರಮಗಳಿಗೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ತಿಳಿಸಿದರು. ರೈಲ್ವೆ ಸಚಿವ ದಿನೇಶ್ ತ್ರಿವೇದಿ ಮತ್ತು ಇತರರು ಪಾಲ್ಗೊಂಡಿದ್ದರು.