ವಿಜಾಪುರ: ಜಿಲ್ಲೆಯ ಎಂಟರ ಪೈಕಿ ಆರು ಕ್ಷೇತ್ರಗಳಲ್ಲಿ ಕೆಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಕೆಜೆಪಿಯ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಕೆ. ಮುಕುಡಪ್ಪ ಹೇಳಿದರು.
ಬಬಲೇಶ್ವರ ಮತ್ತು ನಾಗಠಾಣ ಮತಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಗಳು ಅತಿ ಹೆಚ್ಚು ಮತಗಳನ್ನು ಪಡೆದು ಜಯಭೇರಿ ಭಾರಿಸಲಿದ್ದಾರೆ. ಬಬಲೇಶ್ವರದಲ್ಲಿ ಎಂ.ಬಿ. ಪಾಟೀಲರಿಗೆ ಸೋಲಿನ ಅನುಭವವಾಗಲಿದೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದೇಶದ ಪ್ರಧಾನಿ ಆಯ್ಕೆಯಲ್ಲಿ ಕೆಜೆಪಿ ನಿರ್ಣಾಯಕ ಪಕ್ಷವಾಗಲಿದೆ. ವಿಶೇಷವಾಗಿ ಪಕ್ಷವು 80 ಜನ ಯುವಕರಿಗೆ ಟಿಕೆಟ್ ನೀಡಿದೆ. ಅದಲ್ಲದೆ ಲಿಂಗಾಯತರಿಗೆ 71, ವಕೀಲರಿಗೆ 31, ಮಹಿಳೆಯರಿಗೆ 13, ಮುಸ್ಲಿಂ ಸಮಾಜಕ್ಕೆ 11 ಟಿಕೆಟ್ಗಳನ್ನು ನೀಡಲಾಗಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಬಲೇಶ್ವರ ಮತಕ್ಷೇತ್ರದ ಕೆಜೆಪಿ ಅಭ್ಯರ್ಥಿ ಬಸಪ್ಪ ಹೊನವಾಡ, ಎಸ್.ಎಸ್. ಲೋಣಿ, ಅಕ್ಮಲ್ ಅಹಮ್ಮದ್ ಖಾನ್ ಉಪಸ್ಥಿತರಿದ್ದರು.