ದಾವಣಗೆರೆ: ನಕ್ಸಲರ ದುಷ್ಕೃತ್ಯವೂ ಸೇರಿದಂತೆ ವಿವಿಧ ಘಟನೆಗಳಲ್ಲಿ ಒಂದು ವರ್ಷದ ಅವಧಿಯಲ್ಲಿ ದೇಶದ 636 ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ. ಸಮಾಜದ ನೆಮ್ಮದಿಗಾಗಿ ಪ್ರಾಣತ್ಯಾಗ ಮಾಡಿದ ಅವರ ಸ್ಮರಣೆ ಮಾಡುವುದು ಎಲ್ಲರ ಕರ್ತವ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಎಸ್. ವೆಂಕಟೇಶ್ ಹೇಳಿದರು.
ಜಿಲ್ಲಾ ಪೊಲೀಸ್ ವತಿಯಿಂದ ಶುಕ್ರವಾರ ನಗರದ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ `ಪೊಲೀಸ್ ಹುತಾತ್ಮರ ದಿನಾಚರಣೆ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1959ರಲ್ಲಿ ಅನಿರೀಕ್ಷಿತವಾಗಿ ನಡೆದ ಚೀನಿಯರ ದಾಳಿಯಲ್ಲಿ 10 ಮಂದಿ ಭಾರತೀಯ ಪೊಲೀಸರು ಮೃತಪಟ್ಟರು. ಅಂದಿನಿಂದ ಪ್ರತಿ ವರ್ಷ ಅ. 21ರಂದು ಹುತಾತ್ಮರ ದಿನ ಆಚರಿಸಲಾಗುತ್ತಿದೆ. ಪ್ರಸಕ್ತ ವರ್ಷ ರಾಜ್ಯದ 10 ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಸವರಾಜ್ ಎಸ್. ತಡಹಾಳ್ ಮಾತನಾಡಿ, ಸಾರ್ವಜನಿಕರ ಬದುಕು ಹಸನಾಗಲು ಪೊಲೀಸರ ತ್ಯಾಗವೇ ಕಾರಣ ಎಂದು ಅಭಿಪ್ರಾಯಪಟ್ಟರು.
ಚಿಕ್ಕಪುಟ್ಟ ಘಟನೆಗಳನ್ನು ವೈಭವೀಕರಿಸುವ ಸಂಸ್ಕೃತಿಯನ್ನು ಮಾಧ್ಯಮಗಳು ಕೈಬಿಡಬೇಕು. ಆ ರೀತಿಯ ಉತ್ಪ್ರೇಕ್ಷೆಗಳಿಂದ ಪೊಲೀಸರ ಸುಗಮ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗುತ್ತದೆ ಎಂದರು.
ಪೂರ್ವವಲಯ ಐಜಿಪಿ ಸಂಜಯ್ ಸಹಾಯ್ ಮಾತನಾಡಿ, ಪೊಲೀಸರು ತಮ್ಮ ಜೀವವನ್ನು ಪಣಕ್ಕೆ ಇಡುವ ಕಾರಣದಿಂದಲೇ ಸಾರ್ವಜನಿಕರು ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದರು.
ಜಿಲ್ಲಾ ಪಂಚಾಯ್ತಿ ಸಿಇಒ ಗುತ್ತಿ ಜಂಬುನಾಥ್, ಹೆಚ್ಚುವರಿ ಎಸ್ಪಿ ಬಿ.ಟಿ. ಚವಾಣ್, ಎಎಸ್ಪಿ ಅನುಪಮ್ ಅಗರವಾಲ್, ಡಿವೈಎಸ್ಪಿ ಕೆ.ಪಿ. ಚಂದ್ರಪ್ಪ, ಸಿಪಿಐ ಜಿ.ಎ. ಜಗದೀಶ್, ಎಚ್.ಕೆ. ರೇವಣ್ಣ, ದಶರಥಮೂರ್ತಿ, ನಾಗೇಶ್ ಐತಾಳ್, ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.