ಬೆಂಗಳೂರು: ಅಂಗವಿಕಲತೆ ತಮ್ಮ ಮಿತಿ ಎಂದು ಚಿಂತಿಸದೆ ತಾವೂ ಎಲ್ಲರಂತೆ ಬದುಕಬಹುದು ಎಂಬ ಆತ್ಮವಿಶ್ವಾಸ ಅವರೆಲ್ಲರ ಮುಖದಲ್ಲಿತ್ತು. ಇನ್ನು ಮುಂದೆ ಬೇರೆಯವರನ್ನು ಅವಲಂಬಿಸಿ ಜೀವನ ಮಾಡುವ ಅಗತ್ಯವಿಲ್ಲ. ನಮ್ಮ ಕಾಲ ಮೇಲೆ ನಾವು ನಿಲ್ಲಬೇಕು. ಏನಾದರೂ ಸಾಧನೆ ಮಾಡಬೇಕೆಂಬ ಭಾವ ಅಲ್ಲಿದ್ದವರಲ್ಲಿ ಮನೆ ಮಾಡಿತ್ತು.
ಈ ಆತ್ಮವಿಶ್ವಾಸದ ಸನ್ನಿವೇಶ ಕಂಡುಬಂದಿದ್ದು ರೋಟರಿ ಬೆಂಗಳೂರು ಪೀಣ್ಯ ಮತ್ತು ಜೈಪುರದ ಭಗವಾನ್ ಮಹಾವೀರ ವಿಕಲಾಂಗ ಸಹಾಯತ ಸಮಿತಿ - ಜಂಟಿಯಾಗಿ ನಗರದಲ್ಲಿ ಶುಕ್ರವಾರದಿಂದ ಆಯೋಜಿಸಿರುವ ‘ಉಚಿತ ಕೃತಕ ಕಾಲು ಹಾಗೂ ಮುಂಗೈ ಜೋಡಣಾ’ ಶಿಬಿರದಲ್ಲಿ.
ದೇಶದ ಬೇರೆ-ಬೇರೆ ರಾಜ್ಯಗಳಿಂದ ನೂರಾರು ಸಂಖ್ಯೆಯ ಅಂಗವಿಕಲರು ಶಿಬಿರಕ್ಕೆ ಆಗಮಿಸಿದ್ದಾರೆ. ಹುಟ್ಟಿನಿಂದಲೇ ಪೋಲಿಯೊ ಪೀಡಿತರಾದವರು, ಅಪಘಾತದಿಂದ ತಮ್ಮ ಕೈ ಕಾಲುಗಳನ್ನು ಕಳೆದುಕೊಂಡವರು ಶಿಬಿರದಲ್ಲಿ ಕೃತಕ ಕೈಕಾಲುಗಳನ್ನು ಪಡೆದಿದ್ದಾರೆ.
ಶಿಬಿರ ಉದ್ಘಾಟಿಸಿದ ಗೃಹ ಸಚಿವ ಕೆ.ಜೆ.ಜಾರ್ಜ್, ‘ರೋಟರಿ ಸಂಸ್ಥೆಯು ಅಂಗವಿಕಲರಿಗಾಗಿ ಉತ್ತಮ ಕಾರ್ಯವನ್ನು ಮಾಡುತ್ತಿದೆ. ಸಮಾಜ ಸೇವೆಯನ್ನು ಧ್ಯೇಯವಾಗಿರಿಸಿಕೊಂಡು ಸಂಸ್ಥೆ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ’ ಎಂದರು.
‘ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಸುಮಾರು 19 ಲಕ್ಷ ಮಂದಿ ಅಂಗವಿಕಲರಿದ್ದಾರೆ. ಅಂಗವಿಕಲರಲ್ಲಿಯೂ ಪ್ರತಿಭಾವಂತರಿದ್ದಾರೆ. ಅಂಥವರಿಗೆ ಉತ್ತಮ ಅವಕಾಶ ಕಲ್ಪಿಸಲು ಸರ್ಕಾರ ಬದ್ಧವಾಗಿದೆ’ ಎಂದು ಭರವಸೆ ನೀಡಿದರು.
‘ಅಂಗವಿಕಲರು ಸಹ ಯಾರ ಮೇಲೂ ಅವಲಂಬಿತವಾಗದೆ, ಆತ್ಮವಿಶ್ವಾಸದಿಂದ ಅಂಗವೈಕಲ್ಯತೆಯನ್ನು ಮೀರಬೇಕು’ ಎಂದು ಹೇಳಿದರು.
ಶಿಬಿರದ ಅಧ್ಯಕ್ಷ ಜಿ.ಆರ್.ವಸಂತಕುಮಾರ್ ಮಾತನಾಡಿ, ‘ಸಂಸ್ಥೆಯು ಆಯೋಜಿಸುತ್ತಿರುವ 17 ನೇ ಶಿಬಿರ ಇದಾಗಿದೆ. ನಿಜಕ್ಕೂ ಈ ಶಿಬಿರವನ್ನು ಚೈತನ್ಯ ಶಿಬಿರ ಎಂದು ಕರೆಯಬಹುದು. ಈ ಬಾರಿ 2,900 ಅಂಗವಿಕಲರಿಗೆ ಕೃತಕ ಕೈ ಕಾಲು ಜೋಡಣೆ ಮಾಡಲಾಗುವುದು’ ಎಂದು ವಿವರಿಸಿದರು.
‘ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳದಿಂದ ಅಂಗವಿಕಲರು ಶಿಬಿರಕ್ಕೆ ಬಂದಿದ್ದಾರೆ. ಅವರಿಗೆ ಊಟ, ವಸತಿ ಉಚಿತವಾಗಿ ಒದಗಿಸಲಾಗಿದೆ. ಇಲ್ಲಿಯವರೆಗಿನ ಶಿಬಿರಗಳಲ್ಲಿ ಒಟ್ಟು 29,000 ಮಂದಿ ಅಂಗವಿಕಲರಿಗೆ ಕೃತಕ ಕೈ ಕಾಲು ಜೋಡಿಸಲಾಗಿದೆ’ ಎಂದು ಅವರು ತಿಳಿಸಿದರು.
‘ನಾನು ಎರಡು ವರ್ಷದವಳಿದ್ದಾಗ ವೈದ್ಯರ ಅಚಾತುರ್ಯದಿಂದ ನನ್ನ ಬಲಗಾಲು ಕಳೆದುಕೊಂಡೆ. ಇಂದಿನವರೆಗೂ ಊರುಗಾಲಿನಿಂದ ನಡೆಯುತ್ತಿದ್ದೆ. ಇದೇ ಮೊದಲ ಬಾರಿ ಕೃತಕ ಕಾಲು ಜೋಡಣೆ ಮಾಡಿಸಿದ್ದೇನೆ. ಇದು ಸಂತಸವಾಗುತ್ತಿದೆ’ ಎಂದು ಬಾಗಲಕೋಟೆಯಿಂದ ಬಂದಿದ್ದ ಸುಮತಿ ಹೇಳಿದರು.
‘2 ವರ್ಷಗಳ ಹಿಂದೆ ಎಲೆಕ್ಟ್ರಿಕ್ ಶಾಕ್ನಿಂದ ಬಲಗೈ ಕಳೆದುಕೊಂಡೆ. ಅಂದಿನಿಂದ ಕೆಲಸ ಮಾಡಲು ಪರದಾಡಬೇಕಾಗಿತ್ತು. ಆದರೆ, ಈಗ ಮುಂಗೈ ಜೋಡಣೆಯಿಂದ ನನ್ನ ಕೆಲಸವನ್ನು ನಾನೇ ಮಾಡಿಕೊಳ್ಳಬಹುದು’ ಎಂದಿದ್ದು ಶಿವಮೊಗ್ಗದ ರವಿಶಂಕರ್.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಅಶ್ವಿನಿ ಮೆಹ್ರಾ ಅವರು ರೂ 10 ಲಕ್ಷದ ಚೆಕ್ಅನ್ನು ಶಿಬಿರಕ್ಕಾಗಿ ನೀಡಿದರು. ಶಿಬಿರವು ಜನವರಿ 9 ರವರೆಗೆ ನಡೆಯಲಿದೆ.
ಶಿಬಿರದ ಸ್ಥಳ: ಗಣೇಶ್ ಬಾಗ್, ನಂ.9, ಭಗವಾನ್ ಮಹಾವೀರ ರಸ್ತೆ (ಇನ್ಫೆಂಟ್ರಿ ರಸ್ತೆ) ಶಿವಾಜಿನಗರ. ಮಾಹಿತಿಗಾಗಿ ಸಂಪರ್ಕಿಸಿ: 98450 52554 / 93412 14915.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.