ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲತೆ ಮೀರುವ ಪ್ರಯತ್ನ

ನಗರದಲ್ಲಿ ಜೈಪುರ ಕೃತಕ ಕೈ ಕಾಲು ಜೋಡಣೆ ಶಿಬಿರ
Last Updated 4 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಂಗವಿಕಲತೆ ತಮ್ಮ ಮಿತಿ ಎಂದು ಚಿಂತಿಸದೆ ತಾವೂ ಎಲ್ಲರಂತೆ ಬದುಕಬಹುದು ಎಂಬ ಆತ್ಮವಿಶ್ವಾಸ ಅವರೆಲ್ಲರ ಮುಖದಲ್ಲಿತ್ತು. ಇನ್ನು ಮುಂದೆ ಬೇರೆಯವರನ್ನು ಅವಲಂಬಿಸಿ ಜೀವನ ಮಾಡುವ ಅಗತ್ಯವಿಲ್ಲ. ನಮ್ಮ ಕಾಲ ಮೇಲೆ ನಾವು ನಿಲ್ಲಬೇಕು. ಏನಾದರೂ ಸಾಧನೆ ಮಾಡಬೇ­ಕೆಂಬ ಭಾವ ಅಲ್ಲಿದ್ದವರಲ್ಲಿ ಮನೆ ಮಾಡಿತ್ತು.

ಈ ಆತ್ಮವಿಶ್ವಾಸದ ಸನ್ನಿವೇಶ ಕಂಡು­ಬಂದಿದ್ದು ರೋಟರಿ ಬೆಂಗಳೂರು ಪೀಣ್ಯ ಮತ್ತು ಜೈಪುರದ ಭಗವಾನ್ ಮಹಾ­ವೀರ ವಿಕಲಾಂಗ ಸಹಾಯತ ಸಮಿತಿ - ಜಂಟಿಯಾಗಿ ನಗರದಲ್ಲಿ ಶುಕ್ರವಾರ­ದಿಂದ ಆಯೋಜಿಸಿರುವ ‘ಉಚಿತ ಕೃತಕ ಕಾಲು ಹಾಗೂ ಮುಂಗೈ ಜೋಡಣಾ’ ಶಿಬಿರದಲ್ಲಿ.

ದೇಶದ ಬೇರೆ-ಬೇರೆ ರಾಜ್ಯಗಳಿಂದ ನೂರಾರು ಸಂಖ್ಯೆಯ ಅಂಗವಿಕಲರು ಶಿಬಿರಕ್ಕೆ ಆಗಮಿಸಿದ್ದಾರೆ. ಹುಟ್ಟಿ­ನಿಂ­ದಲೇ ಪೋಲಿಯೊ ಪೀಡಿತರಾದವರು, ಅಪ­ಘಾತದಿಂದ ತಮ್ಮ ಕೈ ಕಾಲುಗ­ಳನ್ನು ಕಳೆದು­ಕೊಂಡ­ವರು ಶಿಬಿರದಲ್ಲಿ ಕೃತಕ ಕೈಕಾಲುಗಳನ್ನು ಪಡೆದಿದ್ದಾರೆ.

ಶಿಬಿರ ಉದ್ಘಾಟಿಸಿದ ಗೃಹ ಸಚಿವ ಕೆ.ಜೆ.ಜಾರ್ಜ್‌, ‘ರೋಟರಿ ಸಂಸ್ಥೆಯು ಅಂಗವಿಕಲರಿಗಾಗಿ ಉತ್ತಮ ಕಾರ್ಯ­ವನ್ನು ಮಾಡುತ್ತಿದೆ. ಸಮಾಜ ಸೇವೆ­ಯನ್ನು ಧ್ಯೇಯವಾಗಿರಿಸಿಕೊಂಡು ಸಂಸ್ಥೆ ಕೆಲಸ ನಿರ್ವಹಿಸು­ತ್ತಿರುವುದು ಶ್ಲಾಘನೀಯ’ ಎಂದರು.

‘ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಸುಮಾರು 19 ಲಕ್ಷ ಮಂದಿ ಅಂಗ­ವಿಕಲ­ರಿದ್ದಾರೆ. ಅಂಗವಿಕಲರಲ್ಲಿಯೂ ಪ್ರತಿಭಾವಂತರಿ­ದ್ದಾರೆ. ಅಂಥವರಿಗೆ ಉತ್ತಮ ಅವಕಾಶ ಕಲ್ಪಿಸಲು ಸರ್ಕಾರ ಬದ್ಧವಾಗಿದೆ’ ಎಂದು ಭರವಸೆ ನೀಡಿದರು.

‘ಅಂಗವಿಕಲರು ಸಹ ಯಾರ ಮೇಲೂ ಅವಲಂಬಿ­ತವಾಗದೆ, ಆತ್ಮ­ವಿಶ್ವಾಸದಿಂದ ಅಂಗವೈಕಲ್ಯತೆಯನ್ನು ಮೀರಬೇಕು’ ಎಂದು ಹೇಳಿದರು.

ಶಿಬಿರದ ಅಧ್ಯಕ್ಷ ಜಿ.ಆರ್‌.ವಸಂತ­ಕುಮಾರ್‌ ಮಾತನಾಡಿ, ‘ಸಂಸ್ಥೆಯು ಆಯೋಜಿಸುತ್ತಿರುವ 17 ನೇ ಶಿಬಿರ ಇದಾಗಿದೆ. ನಿಜಕ್ಕೂ ಈ ಶಿಬಿರವನ್ನು ಚೈತನ್ಯ ಶಿಬಿರ ಎಂದು ಕರೆಯಬಹುದು. ಈ ಬಾರಿ 2,900 ಅಂಗವಿಕಲರಿಗೆ ಕೃತಕ ಕೈ ಕಾಲು ಜೋಡಣೆ ಮಾಡ­ಲಾಗುವುದು’ ಎಂದು ವಿವರಿಸಿದರು.

‘ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳದಿಂದ ಅಂಗವಿ­ಕಲರು ಶಿಬಿರಕ್ಕೆ ಬಂದಿದ್ದಾರೆ. ಅವರಿಗೆ ಊಟ, ವಸತಿ ಉಚಿತವಾಗಿ ಒದಗಿಸ­ಲಾಗಿದೆ. ಇಲ್ಲಿಯವರೆಗಿನ ಶಿಬಿರಗಳಲ್ಲಿ ಒಟ್ಟು 29,000 ಮಂದಿ ಅಂಗವಿ­ಕಲರಿಗೆ ಕೃತಕ ಕೈ ಕಾಲು ಜೋಡಿಸ­ಲಾಗಿದೆ’ ಎಂದು ಅವರು ತಿಳಿಸಿದರು.

‘ನಾನು ಎರಡು ವರ್ಷದವಳಿದ್ದಾಗ ವೈದ್ಯರ ಅಚಾತುರ್ಯದಿಂದ ನನ್ನ ಬಲಗಾಲು ಕಳೆದುಕೊಂಡೆ. ಇಂದಿನವರೆಗೂ ಊರುಗಾಲಿನಿಂದ ನಡೆಯುತ್ತಿದ್ದೆ. ಇದೇ ಮೊದಲ ಬಾರಿ ಕೃತಕ ಕಾಲು ಜೋಡಣೆ ಮಾಡಿಸಿದ್ದೇನೆ. ಇದು ಸಂತಸವಾಗುತ್ತಿದೆ’ ಎಂದು ಬಾಗಲ­ಕೋಟೆ­ಯಿಂದ ಬಂದಿದ್ದ ಸುಮತಿ ಹೇಳಿದರು.

‘2 ವರ್ಷಗಳ ಹಿಂದೆ ಎಲೆಕ್ಟ್ರಿಕ್‌ ಶಾಕ್‌ನಿಂದ ಬಲಗೈ ಕಳೆದು­ಕೊಂಡೆ. ಅಂದಿನಿಂದ ಕೆಲಸ ಮಾಡಲು ಪರ­ದಾಡ­ಬೇಕಾಗಿತ್ತು. ಆದರೆ, ಈಗ ಮುಂಗೈ ಜೋಡಣೆ­ಯಿಂದ ನನ್ನ ಕೆಲಸ­ವನ್ನು ನಾನೇ ಮಾಡಿಕೊಳ್ಳ­ಬಹುದು’ ಎಂದಿದ್ದು ಶಿವಮೊಗ್ಗದ ರವಿಶಂಕರ್‌.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ  ಪ್ರಧಾನ ವ್ಯವಸ್ಥಾಪಕ ಅಶ್ವಿನಿ ಮೆಹ್ರಾ ಅವರು ರೂ 10 ಲಕ್ಷದ ಚೆಕ್‌ಅನ್ನು ಶಿಬಿರಕ್ಕಾಗಿ ನೀಡಿದರು. ಶಿಬಿರವು ಜನವರಿ 9 ರವರೆಗೆ ನಡೆಯಲಿದೆ.

ಶಿಬಿರದ ಸ್ಥಳ: ಗಣೇಶ್‌ ಬಾಗ್‌, ನಂ.9, ಭಗವಾನ್‌ ಮಹಾವೀರ ರಸ್ತೆ (ಇನ್‌­ಫೆಂಟ್ರಿ ರಸ್ತೆ) ಶಿವಾಜಿನಗರ. ಮಾಹಿತಿಗಾಗಿ ಸಂಪರ್ಕಿಸಿ: 98450 52554 / 93412 14915.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT