ಸೊಮವಾರಪೇಟೆ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಅಂಗವಿಕಲ ವಿದ್ಯಾರ್ಥಿಗಳ ಅಥ್ಲೆಟಿಕ್ಸ್ನಲ್ಲಿ ಜಿಲ್ಲೆಯ ಸ್ಪರ್ಧಾಳುಗಳು ಉತ್ತಮ ಸಾಧನೆ ಪ್ರದರ್ಶಿಸಿದ್ದಾರೆ.
17ರ ವಯೋಮಿತಿ ವಿಭಾಗದ ಗುಂಡು ಎಸೆತ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಟಿ.ಪಿ.ವಸಂತಿ ಚಿನ್ನದ ಪದಕ ಗಳಿಸುವುದರೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಉದ್ದ ಜಿಗಿತ ಸ್ಪರ್ಧೆಯಲ್ಲೂ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಗುಂಡು ಎಸೆತ ಸ್ಪರ್ಧೆಯಲ್ಲಿ ಶ್ರೀಮಂಗಲ ಪ್ರೌಢಶಾಲೆಯ ಕೆ.ಆರ್.ಲಕ್ಷ್ಮಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಭಾಗಶಃ ಅಂಧತೆಯುಳ್ಳ ವಿಭಾಗದ ಜಾವಲಿನ್ ಎಸೆತ ಸ್ಪರ್ಧೆಯಲ್ಲಿ ದೊಡ್ಡಮಳ್ತೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹರ್ಷಕುಮಾರ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ಬಿ.ಬಿ.ವೀರಭದ್ರಪ್ಪ, ದೈಹಿಕ ಶಿಕ್ಷಕರಾದ ಕಾಜೂರಿನ ಅಜಿತ್ ಕುಮಾರ್, ಬೇಳೂರು ಶಾಲೆಯ ಶೈಲಾ, ಕೋಣಂಗೇರಿ ಶಾಲೆಯ ಪುಷ್ಪಕುಮಾರಿ ಈ ವಿದ್ಯಾರ್ಥಿಗಳಿಗೆ ತರಬೇತುದಾರರಾಗಿದ್ದರು.