ನವದೆಹಲಿ (ಪಿಟಿಐ): ಅಂತರಿಕ್ಷ್- ದೇವಾಸ್ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಆದಾಯ ತೆರಿಗೆ (ಐ.ಟಿ) ಇಲಾಖೆಯಿಂದ ತನಿಖೆ ನಡೆಸಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಇದರಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳ ಒಳಸಂಚು, ಕರ್ತವ್ಯ ಲೋಪ ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿ ದೇವಾಸ್ ಪರ ನಡೆಸಿದ ಲಾಬಿ ಇತ್ಯಾದಿ ಅಂಶಗಳನ್ನು ತನಿಖೆ ಮಾಡಲು ಕೂಡ ಸರ್ಕಾರ ಆಲೋಚಿಸುತ್ತಿದೆ.
ಒಪ್ಪಂದಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿಯು ಪತ್ತೆ ಹಚ್ಚಿರುವ ಅಂಶಗಳಿಂದ ಇದರಲ್ಲಿ ಸಾಕಷ್ಟು ಅಕ್ರಮ ನಡೆದಿರುವುದು ಗಮನಕ್ಕೆ ಬಂದಿದೆ, ಈ ದಿಸೆಯಲ್ಲಿ ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ದೇವಾಸ್ನಲ್ಲಿ ಬಹುಪಾಲು ಷೇರು ಹೊಂದಿದ್ದ ಕೊಲಂಬಿಯಾ ಕ್ಯಾಪಿಟಲ್ ದೇವಾಸ್ (ಮಾರಿಷಸ್) ಲಿಮಿಟೆಡ್ ಹಾಗೂ ಟೆಲಿಕಾಂ ದೇವಾಸ್ (ಮಾರಿಷಸ್) ಲಿಮಿಟೆಡ್ ವಿಶ್ವಾಸಾರ್ಹತೆಗೆ ಸಂಬಂಧಿಸಿದ ಮಾಹಿತಿ ಕಲೆಹಾಕುವಂತೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಕ್ಕೆ ಸೂಚನೆ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಉನ್ನತ ಮಟ್ಟದ ಸಮಿತಿಯ ವರದಿ ಸರ್ಕಾರದ ಕೈ ಸೇರಿದ್ದು, ಒಪ್ಪಂದದಲ್ಲಿ ಈ ಎರಡೂ ಕಂಪೆನಿಗಳ ಪಾತ್ರದ ಕುರಿತು ತನಿಖೆ ನಡೆಸುವಂತೆ ಅದು ಶಿಫಾರಸು ಮಾಡಿದೆ ಎಂದು ಮೂಲಗಳು ಹೇಳಿವೆ.