ತುಮಕೂರು: ವಸತಿ ಪ್ರದೇಶದಲ್ಲಿರುವ ಅಕ್ಕಿ ಗಿರಣಿಗಳನ್ನು ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿ ಅಖಿಲ ಭಾರತ ಯುವಜನ ಫೆಡರೇಷನ್ ನೇತೃತ್ವದಲ್ಲಿ ಲಿಂಗಾಪುರ ಸುತ್ತಮುತ್ತಲ ನಿವಾಸಿಗಳು ಸೋಮವಾರ ಲಿಂಗಾಪುರ ವೃತ್ತದಿಂದ ನಗರಪಾಲಿಕೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಲಿಂಗಾಪುರ, ಡಿ.ಎಂ.ಪಾಳ್ಯ, ರಂಗಾಪುರ ಸುತ್ತಮತ್ತು ಇರುವ ಗಿರಣಿಗಳಿಂದ ಬಿಳಿ ಮತ್ತು ಕಪ್ಪು ಕಣಗಳಿಂದ ಬೆಳೆಗೆ ಹಾನಿಯಾಗುತ್ತಿದೆ. ಅಲ್ಲದೆ ಜನರ ಆರೋಗ್ಯದ ಮೇಲೆ ದುಷ್ಪಾರಿಣಾಮ ಉಂಟಾಗುತ್ತಿದೆ. ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ನಗರಪಾಲಿಕೆ ಆಯುಕ್ತರು ಮತ್ತು ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಲಿಂಗಾಪುರ ಮಧ್ಯೆ ಹಾದುಹೋಗಿರುವ ಎನ್ಎಚ್4 ರಸ್ತೆಗೆ ಮೇಲ್ಸೆತುವೆ ನಿರ್ಮಿಸಬೇಕು. ಸಮರ್ಪಕ ಕುಡಿಯುವ ನೀರು, ಒಳರಸ್ತೆ, ಮಳೆನೀರು ಚರಂಡಿ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ನಗರಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಶ್ರೀನಿವಾಸ್, ವಾಜಿದ್ಖಾನ್, ಗಿರೀಶ್, ಜಗದೀಶ್, ರಂಗನಾಥ್, ಮೋಹನ್ಕುಮಾರ್, ವಿಜಯಕುಮಾರ್, ವಾಸುದೇವಕುಮಾರ್ ಮುಂತಾದವರಿದ್ದರು.