ಬೇಲೂರು: `ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಾಗಿರುವ ಅಕ್ರಮ ಮದ್ಯದ ಹಾವಳಿ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ~ ಅರಸೀಕೆರೆ ಡಿವೈಎಸ್ಪಿ. ರಶ್ಮಿ ಭರವಸೆ ನೀಡಿದರು.
ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು ಅಬಕಾರಿ ಇಲಾಖೆ ಸೇರಿದಂತೆ ತಾಲ್ಲೂಕಿನ ಎಲ್ಲಾ ಇಲಾಖೆಗಳ ಮುಖ್ಯಸ್ಥರ ಸಭೆಯನ್ನು ಶೀಘ್ರದಲ್ಲಿಯೇ ಕರೆದು ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ಬೇಲೂರು ಪೊಲೀಸ್ ಠಾಣೆ ಆರಂಭಗೊಂಡಾಗಿನಿಂದಲೂ ಇರುವಷ್ಟೇ ಪೊಲೀಸರು ಈಗಲೂ ಇದ್ದಾರೆ. ಸಂಚಾರ ವ್ಯವಸ್ಥೆ ಸುಗಮಗೊಳಿಸಲು, ವಾಹನಗಳ ನಿಲುಗಡೆಗೆ ಸಂಬಂಧಿಸಿದಂತೆ ಹೊಸ ವ್ಯವಸ್ಥೆ ಜಾರಿಗೊಳಿಸಲು ಉದ್ದೇಶಿಸಿದ್ದು, ಪುರಸಭೆಗೆ ಸೇರಿದ ಖಾಲಿ ಜಾಗಗಳಲ್ಲಿ ವಾಹನಗಳ ನಿಲುಗಡೆ ಮಾಡಲಾಗುವುದು. ರಾತ್ರಿ ಗಸ್ತಿಗೆ ಸಿಬ್ಬಂದಿ ಕೊರತೆಯಿಲ್ಲ. ಆಯಕಟ್ಟಿನ ಜಾಗಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ತಾ.ಪಂ. ಸದಸ್ಯ ಪರ್ವತಯ್ಯ ಮಾತನಾಡಿ ತಾಲ್ಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟದಲ್ಲಿ ವ್ಯವಸ್ಥಿತ ಜಾಲವಿದೆ. ಮದ್ಯದ ಅಂಗಡಿಗಳ ಮಾಲೀಕರು ಕೆಲವು ಗ್ರಾಮಗಳನ್ನು ದತ್ತು ಪಡೆದು ಅಲ್ಲಿ ತಮ್ಮ ಅಂಗಡಿಯಿಂದ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ. ಶುಂಠಿ ಲಾರಿಗಳು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ ಎಂದರು.
ಪುರಸಭಾಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಜಿ.ಪಂ. ಸದಸ್ಯರಾದ ಅಮಿತ್ಶೆಟ್ಟಿ, ಜಿ.ಟಿ.ಇಂದಿರಾ, ಸಿ.ಪಿ.ಐ. ಮಂಜಯ್ಯ, ಪಿ.ಎಸ್.ಐ.ಗಳಾದ ಎಂ.ಎಸ್.ದೀಪಕ್, ವೆಂಕಟೇಶ್, ಪುರಸಭಾ ಸದಸ್ಯ ಬಿ.ಎ.ಜಮಾಲುದ್ದೀನ್, ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್, ಸುದರ್ಶನ್, ಜಿ.ಕೆ.ಕುಮಾರ್ ಹಾಜರಿದ್ದರು.