ನವದೆಹಲಿ, (ಪಿಟಿಐ): ಉದ್ದೇಶಿತ ಅಣು ಸ್ಥಾವರಗಳ ನಿರ್ಮಾಣಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ನಾಗರಿಕ ಸಮಿತಿ ಶುಕ್ರವಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ಮಾಜಿ ಆಡಳಿತಗಾರರು, ವಿಜ್ಞಾನಿಗಳು, ನೌಕಾದಳದ ನಿವೃತ್ತ ಮುಖ್ಯಸ್ಥರು ಹಾಗೂ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳನ್ನು ಒಳಗೊಂಡ ಸಮಿತಿ ಜಂಟಿಯಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.
ಸ್ಥಾವರಗಳ ಸುರಕ್ಷಾ ಕ್ರಮಗಳ ಪುನರ್ ಪರಿಶೀಲನೆ, ಅಣುಶಕ್ತಿಯಿಂದಾಗುವ ಅನಾಹುತಗಳ ಅಧ್ಯಯನ ಪರಾಮರ್ಶೆಗೆ ತಜ್ಞರ ಸಮಿತಿ ರಚಿಸುವಂತೆ ಕೋರಿದೆ. ಅಣು ಸ್ಥಾವರಗಳ ಸ್ಥಾಪನೆಗೆ ಪರವಾನಗಿ, ಅನುಮತಿ ರದ್ದು ಅಧಿಕಾರದಂತಹ ಕಾರ್ಯಗಳು ಸಮಿತಿಯ ಮೇಲುಸ್ತುವಾರಿಯಲ್ಲಿ ನಡೆಯಬೇಕು ಎಂದು ಕೋರಲಾಗಿದೆ.
ಮಾಜಿ ಸಂಪುಟ ಕಾರ್ಯದರ್ಶಿ ಟಿ.ಎಸ್.ಆರ್ ಸುಬ್ರಮಣಿಯನ್, ನೌಕಾದಳ ನಿವೃತ್ತ ಮುಖ್ಯಸ್ಥ ಎಲ್.ರಾಮದಾಸ್, ನಿವೃತ್ತ ಮುಖ್ಯ ಚುನಾವಣಾ ಅಧಿಕಾರಿ ಎನ್.ಗೋಪಾಲಸ್ವಾಮಿ, ಪ್ರಧಾನ ಮಂತ್ರಿಗಳ ಮಾಜಿ ಕಾರ್ಯದರ್ಶಿ ಕೆ.ಆರ್.ವೇಣುಗೋಪಾಲ ಮತ್ತು ಅಣು ವಿಜ್ಞಾನಿ ಪಿ.ಎಂ.ಭಾರ್ಗವ ಸಮಿತಿಯಲ್ಲಿದ್ದಾರೆ.